ನಕ್ಸಲರು
ಸುಕ್ಮಾ: ಒಟ್ಟಾರೆ ₹50 ಲಕ್ಷ ಇನಾಮು ಘೋಷಣೆಯಾಗಿದ್ದ 16 ನಕ್ಸಲರು ಸೇರಿದಂತೆ 27 ಮಂದಿ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಎದುರು ಶರಣಾಗಿದ್ದಾರೆ.
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಹಿರಿಯ ನಕ್ಸಲೈಟ್ ಮಲ್ಲೊಜುಲ ವೇಣುಗೋಪಾಲ್ ಅಲಿಯಾಸ್ ಭೂಪತಿ ಮತ್ತು ಇತರ 61 ನಕ್ಸಲರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಸಮ್ಮುಖದಲ್ಲಿ ಶರಣಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಶರಣಾದ 27 ನಕ್ಸಲರಲ್ಲಿ 10 ಮಂದಿ ಮಹಿಳೆಯರು ಸೇರಿದ್ದಾರೆ. ಹಿರಿಯ ಪೊಲೀಸರು ಹಾಗೂ ಕೇಂದ್ರ ಮೀಸಲು ಪಡೆಯ (ಸಿಆರ್ಪಿಎಫ್) ಅಧಿಕಾರಿಗಳ ಎದುರು ಶರಣಾಗಿದ್ದಾರೆ.
ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ಬೆಟಾಲಿಯನ್ ನಂ.1ರ ಸದಸ್ಯ ಓಯಮ್ ಲಖ್ಮು (53) ತಲೆಗೆ 10 ಲಕ್ಷ ಇನಾಮು ಘೋಷಿಸಲಾಗಿತ್ತು. ಮಾವೋವಾದಿಗಳ ಪಿಎಲ್ಜಿಎ ಬೆಟಾಲಿಯನ್ ಸಂಖ್ಯೆ 1ರಲ್ಲಿ ಪ್ಲಟೂನ್ ಪಾರ್ಟಿ ಕಮಿಟಿ ಸದಸ್ಯೆ ಮದ್ವಿ ಭೀಮ (18), ಪ್ರಾದೇಶಿಕ ಮಿಲಿಟರಿ ಕಂಪನಿ ನಂ.2ರ ಸದಸ್ಯೆ ಸುನೀತಾ ಅಲಿಯಾಸ್ ಕವಾಸಿ ಸೋಮ್ಡಿ (24) ಮತ್ತು ಸೋಡಿ ಮಾಸೆ (22) ಸೇರಿ ಮೂವರು ನಕ್ಸಲರಿಗೆ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೆ, ಒಂದು ಕೇಡರ್ಗೆ ₹3 ಲಕ್ಷ, ಎರಡು ಕೇಡರ್ಗಳಿಗೆ ತಲಾ ₹2 ಲಕ್ಷ ಹಾಗೂ ಒಂಬತ್ತು ಕೇಡರ್ಗಳಿಗೆ ತಲಾ ₹1 ಲಕ್ಷ ಇನಾಮು ಘೋಷಿಸಲಾಗಿತ್ತು.
ಶರಣಾದ ಎಲ್ಲಾ ನಕ್ಸಲರಿಗೆ ತಲಾ ₹50 ಸಾವಿರ ನೆರವು ನೀಡಲಾಗಿದ್ದು, ಸರ್ಕಾರದ ಯೋಜನೆಗಳ ಪ್ರಕಾರ ಅವರಿಗೆ ಮತ್ತಷ್ಟು ಪುನರ್ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೊಳ್ಳು ಮತ್ತು ಅಮಾನವೀಯ ಮಾವೋವಾದಿ ಸಿದ್ಧಾಂತ ಮತ್ತು ಸ್ಥಳೀಯ ಬುಡಕಟ್ಟು ಜನಾಂಗದವರ ಮೇಲೆ ನಡೆಸಿದ ದೌರ್ಜನ್ಯಗಳಿಂದ ನಿರಾಶೆಗೊಂಡ ನಕ್ಸಲರು ಶರಣಾಗಿದ್ದಾರೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.