ನವದೆಹಲಿ: ಚುನಾವಣೆ ನಡೆಸಿದ ನಂತರ ಜಮ್ಮು- ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ಬಯಸುತ್ತಿರುವುದರ ವಿಚಾರವಾಗಿ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟೀಕಾಪ್ರಹಾರ ನಡೆಸಿದ್ದಾರೆ.
'ಜಮ್ಮು-ಕಾಶ್ಮೀರಕ್ಕೆ ಮೊದಲು ರಾಜ್ಯದ ಸ್ಥಾನಮಾನ ಸಿಗಲಿ. ಆ ನಂತರ ಚುನಾವಣೆಗಳು ನಡೆಯಲಿ ಎಂಬುದು ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳ ಒತ್ತಾಸೆಯಾಗಿದೆ' ಎಂದು ಚಿದಂಬರಂ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
'ರಾಜ್ಯಾಡಳಿತವು ಚುನಾವಣೆಗಳನ್ನು ನಡೆಸಬೇಕು. ಅಂತಹ ಚುನಾವಣೆಗಳು ಮಾತ್ರ ಮುಕ್ತ ಮತ್ತು ನ್ಯಾಯಸಮ್ಮತವಾಗಿರುತ್ತವೆ. ಕುದುರೆ ಬಂಡಿಯನ್ನು ಎಳೆಯುತ್ತದೆ. ಆದರೆ, ಬಂಡಿಯ ಹಿಂದೆ ಕುದುರೆಯನ್ನು ನಿಲ್ಲಿಸಲು ಸರ್ಕಾರವು ಏಕೆ ಬಯಸುತ್ತದೆ? ಇದೊಂದು ವಿಲಕ್ಷಣ ನೀತಿಯಾಗಿದೆ' ಎಂದು ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಜಮ್ಮು- ಕಾಶ್ಮೀರದ ಸರ್ವಪಕ್ಷಗಳ ಮುಖಂಡರ ಸಭೆಯು ಗುರುವಾರ ನಡೆದಿದೆ. ಸಭೆಯಲ್ಲಿ ಜಮ್ಮು- ಕಾಶ್ಮೀರದ ವಿವಿಧ ರಾಜಕೀಯ ಪಕ್ಷಗಳ 14 ನಾಯಕರು ಭಾಗಿಯಾಗಿದ್ದರು.
'ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಲ್ಲಿ ಪ್ರಜಾಪ್ರಭುತ್ವದ ಪ್ರಕ್ರಿಯೆಗಳು ನಡೆಯಬೇಕು. ಚುನಾವಣೆ ನಡೆಯಬೇಕು. ಶಾಂತಿಯುತವಾಗಿ ನಡೆಯುವ ಚುನಾವಣೆಯು, ರಾಜ್ಯದ ಸ್ಥಾನವನ್ನು ಮರಳಿ ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ನಡೆಸಲು ಮತ್ತು ಸಂವಿಧಾನಕ್ಕೆ ಬದ್ಧವಾಗಿರಲು ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲರೂ ಒಪ್ಪಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.