ಮುಂಬೈ: ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ಅಮರಾವತಿ ಜಿಲ್ಲೆಯಲ್ಲಿ ನೀರಿನಿಂದ ಹರಡುವ ಕಾಲರಾ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದೆ. ಈ ಮಾರಕ ಕಾಯಿಲೆಯಿಂದ ಈವರೆಗೆ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕ ಆರೋಗ್ಯ ಇಲಾಖೆಯ ಸಮಗ್ರ ರೋಗಗಳ ಕಣ್ಗಾವಲು ಕಾರ್ಯಕ್ರಮದಡಿ(ಐಡಿಎಸ್ಪಿ) ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಕಾಲರಾದಿಂದ ಐವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ‘ಈ ವರೆಗೆ 181 ಮಂದಿಯಲ್ಲಿ ಕಾಲರ ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ’ಎಂದು ಐಡಿಎಸ್ಪಿ ಹೇಳಿದೆ. ಇದರಲ್ಲಿ ಇಬ್ಬರು ಮಹಿಳೆಯರೂ ಸೇರಿ 24–40 ವರ್ಷ ಒಳಗಿನ ಮೂವರು ಮತ್ತು 70 ವರ್ಷ ಮೇಲ್ಪಟ್ಟ ಇಬ್ಬರು ಅಸುನೀಗಿದ್ದಾರೆ.
ಈಗಾಗಲೇ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ಜುಲೈ 7ರಂದು ಜಿಲ್ಲೆಯ ಅಮರಾವತಿ ಮತ್ತು ಚಖಲ್ದಾರಾ ಬ್ಲಾಕ್ಗಳಲ್ಲಿ ರೋಗ ಸ್ಫೋಟಗೊಂಡಿತ್ತು.
ಚಿಖಲ್ದಾರಾ ಬ್ಲಾಕ್ನ ಡೊಂಗ್ರಿ, ಕೊಯ್ಲಾರಿ ಮತ್ತು ಘಾನಾ ಹಳ್ಳಿ ಮತ್ತು ಅಮರಾವತಿ ಬ್ಲಾಕ್ನ ಅಯಾ ಅಕೊಲಾ ಹಳ್ಳಿಗಳಲ್ಲಿ ಬಹುತೇಕ ಪ್ರಕರಣಗಳು ಪತ್ತೆಯಾಗಿವೆ. ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಈ ನಡುವೆಯೂ ವೈದ್ಯಕೀಯ ಸಿಬ್ಬಂದಿ 24 ಗಂಟೆಗಳ ಕಾಲ ರೋಗಪೀಡಿತ ಹಳ್ಳಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರೋಗ ಪತ್ತೆ, ಚಿಕಿತ್ಸೆ ಮತ್ತೆ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.