ಲಖನೌ: ಮುಘಲ್ಸರಾಯ್, ಅಲಹಾಬಾದ್ ಮತ್ತು ಫೈಜಾಬಾದ್ ಪಟ್ಟಣಗಳ ಹೆಸರು ಬದಲಾವಣೆ ನಂತರ ಉತ್ತರಪ್ರದೇಶದಲ್ಲಿ ಮತ್ತಷ್ಟು ನಗರ, ಪಟ್ಟಣಗಳ ಹೆಸರು ಬದಲಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ. ಈ ಪೈಕಿ ಮುಝಾಫರ್ನಗರ್, ಆಗ್ರಾ ಮತ್ತು ಸುಲ್ತಾನ್ಪುರ್ ಪಟ್ಟಣಗಳ ಹೆಸರು ಬದಲಿಸಬೇಕು ಎನ್ನುವ ಬಹಿರಂಗ ಚರ್ಚೆ ಆರಂಭವಾಗಿದೆ.
‘ಮುಝಾಫರ್ನಗರವನ್ನು ಶೀಘ್ರ ಲಕ್ಷ್ಮೀನಗರ ಎಂದು ಬದಲಿಸಲಾಗುವುದು’ಮೀರತ್ ಕ್ಷೇತ್ರದ ಶಾಸಕ ಸಂಗೀತ್ ಸೋಮ್ ಹೇಳಿಕೆ ನೀಡಿದ್ದಾರೆ. ಉತ್ತರ ಆಗ್ರಾ ಕ್ಷೇತ್ರದ ಶಾಸಕ ಜಗನ್ ಪ್ರಸಾದ್ ಗರ್ಗ್ ‘ತಾಜ್ಮಹಲ್ ನಗರ ಆಗ್ರಾದ ಹೆಸರನ್ನು ಆಗ್ರಾವನ್ ಅಥವಾ ಅಗ್ರಾವಾಲ್ ಎಂದು ಬದಲಿಸಬೇಕು’ ಎನ್ನುತ್ತಿದ್ದಾರೆ. ಮತ್ತೊಬ್ಬ ಬಿಜೆಪಿ ಶಾಸಕ ದೇವಮಣಿ ದ್ವಿವೇದಿ ಕಳೆದ ಆಗಸ್ಟ್ನಲ್ಲಿಯೇ ಸುಲ್ತಾನ್ಪುರ ಪಟ್ಟಣದ ಹೆಸರನ್ನು ರಾಮನ ಮಗ ಕುಶನ ಹೆಸರಿನಲ್ಲಿ ಕುಶಭಾವಾನ್ಪುರ್ ಎಂದು ಬದಲಿಸಬೇಕೆಂದು ನಿರ್ಣಯ ಮಂಡಿಸಿದ್ದರು ಎಂದು ‘ದಿ ಹಿಂದೂ’ ವರದಿ ಮಾಡಿದೆ.
ಹೆಸರು ಬದಲಾವಣೆ ಪ್ರಸ್ತಾವಗಳಿಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ, ‘ಸರ್ಕಾರ ಇಂಥ ವಿನಂತಿಗಳನ್ನು ಖಂಡಿತವಾಗಿಪರಿಗಣಿಸಲಿದೆ. ಊರುಗಳ ಮೂಲ ಹೆಸರುಗಳನ್ನು ಮರುನಾಮಕರಣ ಮಾಡಲು ಉತ್ಸುಕವಾಗಿದೆ. ಈ ಹಿಂದೆ ಆಗಿರುವ ತಪ್ಪುಗಳನ್ನು ನಾವು ಸರಿಪಡಿಸುತ್ತಿದ್ದೇವೆ’ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.