ADVERTISEMENT

ಪೌರತ್ವ ತಿದ್ದುಪಡಿ ಮಸೂದೆಗೆ ಅಸ್ತು

ಪಿಟಿಐ
Published 10 ಡಿಸೆಂಬರ್ 2019, 6:07 IST
Last Updated 10 ಡಿಸೆಂಬರ್ 2019, 6:07 IST
   

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ತಡ ರಾತ್ರಿ ಅಂಗೀಕಾರಗೊಂಡಿತು.

ಮಸೂದೆ ಕುರಿತು 7 ತಾಸಿನವರೆಗೆ ಕಾವೇರಿದ ಚರ್ಚೆ ನಡೆಯಿತು. ನಂತರ ಮತಕ್ಕೆ ಹಾಕಿದಾಗ ಮಸೂದೆ ಪರವಾಗಿ 311 ಹಾಗೂ ವಿರುದ್ಧ 82 ಮತಗಳು ಬಂದವು.

ರಾಜ್ಯಸಭೆಯಲ್ಲಿ ಈ ಮಸೂದೆ ಬುಧವಾರ ಮಂಡನೆಯಾಗಲಿದೆ.

ADVERTISEMENT

ಚರ್ಚೆ ಬಳಿಕ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ ಅವರು, ಉದ್ದೇಶಿತ ಮಸೂದೆಯು ರಾಷ್ಟ್ರದಲ್ಲಿನ ಅಲ್ಪಸಂಖ್ಯಾತರಿಗೆ ತಾರತಮ್ಯ ಮಾಡುತ್ತದೆ ಎಂಬ ವಿರೋಧಪಕ್ಷಗಳ ಟೀಕೆಗಳನ್ನು ತಿರಸ್ಕರಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ಧರ್ಮೀಯರ ಹಿತವನ್ನು ಕಾಪಾಡಲು ಬದ್ಧವಾಗಿದೆ ಎಂದು ಹೇಳಿದರು.

ನೆರೆ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದ ಅಲ್ಲಿನ ಅಲ್ಪಸಂಖ್ಯಾತ ನಿರಾಶ್ರಿತರಿಗೆ ಪೌರತ್ವ (ತಿದ್ದುಪಡಿ) ಮಸೂದೆ ಪರಿಹಾರ ಒದಗಿಸಲಿದೆ ಎಂದೂ ಪ್ರತಿಪಾದಿಸಿದರು.

‘ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಖಂಡಿತವಾಗಿಯೂ ಜಾರಿಗೆ ತರಲಾಗುವುದು. ಇದರಿಂದ ದೇಶದಲ್ಲಿ ಒಬ್ಬ ಅಕ್ರಮ ವಲಸಿಗನೂ ಉಳಿಯುವುದಿಲ್ಲ’ ಎಂದು ಶಾ ಹೇಳಿದರು.

1947ರಲ್ಲಿ ಭಾರತ ಧರ್ಮದ ಆಧಾರದ ಮೇಲೆ ಇಬ್ಭಾಗವಾಗದಿದ್ದರೆ ಪೌರತ್ವ (ತಿದ್ದುಪಡಿ) ಮಸೂದೆಯ ಅಗತ್ಯ ಇರಲಿಲ್ಲ ಎಂದ ಅವರು 1951 ರಲ್ಲಿ ಭಾರತದಲ್ಲಿ ಶೇ 9.8ರಷ್ಟು ಇದ್ದ ಮುಸ್ಲಿಂ ಜನಸಂಖ್ಯೆ 2011ರ ವೇಳೆಗೆ ಶೇ 14.8ಕ್ಕೆ ಏರಿದೆ. ಆದರೆ ಇದೇ ಅವಧಿಯಲ್ಲಿ ಹಿಂದೂ ಸಮುದಾಯದ ಜನಸಂಖ್ಯೆ ಶೇ 84ರಿಂದ ಶೇ 79ಕ್ಕೆ ಕುಸಿದಿದೆ ಎಂದು ವಿವರಿಸಿದರು.

ಈ ಮಸೂದೆಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಮತ್ತು ಇದು ಅಸಂವಿಧಾನಾತ್ಮಕವೂ ಅಲ್ಲ. ಅಲ್ಲದೆ ಭಾರತದಲ್ಲಿರುವ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಮ್ಯಾನ್ಮಾರ್‌ನಿಂದ ಬರುವ ರೋಹಿಂಗ್ಯಾ ಮುಸ್ಲಿಮರಿಗೆ ಭಾರತದ ಪೌರತ್ವವನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

***

ಯಾವುದೇ ಧರ್ಮದ ಯಾರೇ ವ್ಯಕ್ತಿಯು ಮೋದಿ ಸರ್ಕಾರದ ಅವಧಿಯಲ್ಲಿ ಭಯ ಪಡುವ ಅಗತ್ಯ ಇಲ್ಲ
- ಅಮಿತ್‌ ಶಾ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.