ಮಧುರೈ: ಕಾನೂನು ವೃತ್ತಿಪರರಲ್ಲಿ ಪುರುಷ–ಮಹಿಳೆ ಅನುಪಾತದಲ್ಲಿ ದೊಡ್ಡ ಅಂತರವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ‘ನಮ್ಮಲ್ಲಿ ಪ್ರತಿಭಾನ್ವಿತ ಯುವ ವಕೀಲೆಯರಿಗೆ ಕೊರತೆಯಿಲ್ಲ. ಮಹಿಳೆಯರಿಗೂ ಸಮಾನ ಅವಕಾಶ ಸಿಗಬೇಕಿದೆ’ ಎಂದರು.
ಮಹಿಳೆಯರ ನೇಮಕಾತಿ ಕುರಿತು ನೇಮಕಾತಿ ವಿಭಾಗದ ನಿಲುವು ‘ಸಂದೇಹಾಸ್ಪದ‘ವಿದ್ದಂತಿದೆ. ಮಹಿಳೆಗೆ ಅವರ ಕುಟುಂಬದ ಜವಾಬ್ದಾರಿಗಳು ವೃತ್ತಿಗೆ ತೊಡಕಾಗಬಹುದು ಎಂದು ಭಾವಿಸಿದಂತಿದೆ ಎಂದರು.
ಅಂಕಿ ಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ವಕೀಲಿಕೆಗೆ 50 ಸಾವಿರ ಪುರುಷರು ನೋಂದಣಿ ಮಾಡಿಕೊಂಡಿದ್ದರೆ, ಮಹಿಳೆಯರ ಸಂಖ್ಯೆ 5 ಸಾವಿರ ಮಾತ್ರ. ಪುರುಷ–ಮಹಿಳೆಯರ ನಡುವೆ ದೊಡ್ಡ ಅಂತರವಿದೆ ಎಂದು ಹೇಳಿದರು.
ಕಾನೂನು ವೃತ್ತಿಯು ಮಹಿಳೆಯರಿಗ ಸಮಾನ ಅವಕಾಶ ನೀಡುತ್ತಿಲ್ಲ. ದೇಶದ ಅಂಕಿ ಅಂಶದ ಸ್ಥಿತಿಯೂ ಹೀಗೇ ಇದೆ. ಆದರೆ, ಚಿತ್ರಣ ಬದಲಾಗುತ್ತಿದೆ. ಜಿಲ್ಲಾ ನ್ಯಾಯಾಲಯಗಳಿಗೆ ಈಚೆಗೆ ನಡೆದ ನೇಮಕಾತಿಯಲ್ಲಿ ಶೇ 50ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಆದರೆ, ಒಟ್ಟಾಗಿ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.