ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಗಂಭೀರ ಸನ್ನಿವೇಶಗಳ ಕುರಿತು ನಿಖರವಾಗಿ ಮುನ್ಸೂಚನೆಗಳನ್ನು ನೀಡಲು ತೊಡಕಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಮಹಾ ನಿರ್ದೇಶಕ ಮೃತ್ಯುಂಜಯಮೊಹಪಾತ್ರ ಹೇಳಿದ್ದಾರೆ.
ಪ್ರಪಂಚದಾದ್ಯಂತ ಇರುವ ಎಲ್ಲ ಹವಾಮಾನ ಇಲಾಖೆಗಳಿಗೂಈ ಸಮಸ್ಯೆ ಎದುರಾಗಿದೆ ಎಂದಿರುವ ಮೃತ್ಯುಂಜಯ,ಐಎಂಡಿಯು ಸವಾಲುಗಳಿಗೆ ಅನುಗುಣವಾಗಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಹೆಚ್ಚೆಚ್ಚು ರಾಡಾರ್ಗಳನ್ನು ಅಳವಡಿಸುತ್ತಿದೆ ಎಂದೂ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿರುವಐಎಂಡಿ ಮಹಾ ನಿರ್ದೇಶಕ,ಮುಂಗಾರು ಮಳೆಯು ದೇಶದಲ್ಲಿ ಯಾವುದೇ ಮಹತ್ವದ ಪ್ರವೃತ್ತಿಯನ್ನು ತೋರಿಸಿಲ್ಲ. ಭಾರೀ ಮಳೆ ಸಂದರ್ಭಗಳು ಏರಿಕೆಯಾಗಿದ್ದು, ಅಲ್ಪ ಮಳೆ ಸುರಿಯುವಿಕೆ ಕುಸಿದಿದೆ ಎಂದು ಮಾಹಿತಿ ನೀಡಿದ್ದಾರೆ.
ಪರಿಣಾಮ ಆಧಾರಿತ ಮುನ್ಸೂಚನೆ ನೀಡುವುದು 2025ರ ಹೊತ್ತಿಗೆ ಹೆಚ್ಚಿನ ನಿಖರತೆಯನ್ನು ಕಂಡುಕೊಳ್ಳಲು ನೆರವಾಗಲಿದೆ. ಐಎಂಡಿಯು ಮುಂಬರುವ ವರ್ಷಗಳಲ್ಲಿ ಪಂಚಾಯಿತಿ ಮಟ್ಟದ ಸಮುದಾಯಗಳು, ನಗರಗಳ ನಿರ್ದಿಷ್ಟ ಪ್ರದೇಶಗಳಿಗೂ ಮುನ್ಸೂಚನೆಗಳನ್ನು ನೀಡುವ ಸಾಮರ್ಥ್ಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹವಾಮಾನ ವೈಪರೀತ್ಯವು ವಾತಾವರಣದಲ್ಲಿಅಸ್ಥಿರತೆಯನ್ನು ಹೆಚ್ಚಿಸಿದೆ. ಗುಡುಗು, ಮಿಂಚು ಹಾಗೂ ಭಾರಿ ಮಳೆಗೆ ಕಾರಣವಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿನ ಚಂಡಮಾರುತ ತೀವ್ರತೆಯೂ ಏರುತ್ತಿದೆ ಎಂದು ವಿವರಿಸಿದ್ದಾರೆ.
ವಾತಾವರಣದಲ್ಲಿನ ಇಂತಹ ಬೆಳವಣಿಗೆಗಳುನಿರಂತರವಾಗಿ ಹೆಚ್ಚುತ್ತಿರುವುದು ಮುನ್ಸೂಚನೆ ನೀಡುವಿಕೆಗೆ ಸವಾಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಭಾರಿ ಮಳೆಯನ್ನು ಅಂದಾಜಿಸುವ ಸಾಮರ್ಥ್ಯಕ್ಕೂ ಅಡ್ಡಿಯಾಗುತ್ತಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.