ADVERTISEMENT

ಮಹಾರಾಷ್ಟ್ರ: ಮಹಾ ವಿಕಾಸ ಆಘಾಡಿಯಿಂದ ಹೊರನಡೆದ ಸಮಾಜವಾದಿ ಪಕ್ಷ

ಬಾಬರಿ ಮಸೀದಿ ಧ್ವಂಸ ಸಮರ್ಥನೆಯ ಜಾಹೀರಾತು ಪ್ರಕಟಿಸಿದ ಶಿವಸೇನಾ (ಉದ್ಧವ್‌ ಬಣ)

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2024, 13:56 IST
Last Updated 7 ಡಿಸೆಂಬರ್ 2024, 13:56 IST
ಶಿನಸೇವಾ (ಉದ್ಧವ್‌ ಬಣ) ಮುಖಂಡ ಮಿಲಿಂದ್‌ ಅವರ ‘ಎಕ್ಸ್‌’ ಪೋಸ್ಟ್‌. ‘ಯಾರು ಇದನ್ನು ಮಾಡಿದ್ದಾರೊ ಅವರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದಿದ್ದ ಬಾಳಾ ಸಾಹೇಬ್‌ ಠಾಕ್ರೆ ಅವರ ಹೇಳಿಕೆಯು ಪೋಸ್ಟ್‌ನಲ್ಲಿದೆ
ಶಿನಸೇವಾ (ಉದ್ಧವ್‌ ಬಣ) ಮುಖಂಡ ಮಿಲಿಂದ್‌ ಅವರ ‘ಎಕ್ಸ್‌’ ಪೋಸ್ಟ್‌. ‘ಯಾರು ಇದನ್ನು ಮಾಡಿದ್ದಾರೊ ಅವರ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದಿದ್ದ ಬಾಳಾ ಸಾಹೇಬ್‌ ಠಾಕ್ರೆ ಅವರ ಹೇಳಿಕೆಯು ಪೋಸ್ಟ್‌ನಲ್ಲಿದೆ   

ಮುಂಬೈ: ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ಶುಭಾಶಯ ಕೋರಿ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾವು ಪತ್ರಿಕೆಗಳಿಗೆ ಜಾಹೀರಾತು ನೀಡಿದನ್ನು ಆಕ್ಷೇಪಿಸಿ ಸಮಾಜವಾದಿ ಪಕ್ಷವು ಮಹಾರಾಷ್ಟ್ರದಲ್ಲಿ ‘ಮಹಾ ವಿಕಾಸ ಆಘಾಡಿ’ (ಎಂವಿಎ) ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದೆ.

‘ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ಶುಭಾಶಯ ಕೋರುವ ಜಾಹೀರಾತನ್ನು ಶಿವಸೇನಾ (ಉದ್ಧವ್‌ ಬಣ) ನೀಡಿದೆ. ಉದ್ಧವ್‌ ಅವರ ಆಪ್ತ ಮಿಲಿಂದ್‌ ನಾರ್ವೇಕರ್‌ ಕೂಡ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಆದ್ದರಿಂದ ನಾವು ಮೈತ್ರಿಕೂಟವನ್ನು ತೊರೆಯುತ್ತಿದ್ದೇವೆ. ಈ ಬಗ್ಗೆ ನಮ್ಮ ನಾಯಕ ಅಖಿಲೇಶ್‌ ಯಾದವ್‌ ಅವರೊಂದಿಗೂ ಮಾತನಾಡುತ್ತೇನೆ’ ಎಂದು ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಅಬು ಆಜ್ಮಿ ಹೇಳಿದ್ದಾರೆ.

‘ಸಂವಿಧಾನವನ್ನು ಉಳಿಸುವುದು ಮತ್ತು ಜಾತ್ಯತೀತ ತತ್ವಗಳ ಆಧಾರದಲ್ಲಿ ಮಹಾ ವಿಕಾಸ ಆಘಾಡಿ ರೂಪುಗೊಂಡಿತ್ತು. ಈಗ ಆಘಾಡಿಯವರೇ ಇಂಥ ಭಾಷೆ ಬಳಸಿದರೆ, ಬಿಜೆಪಿಗೂ ಅವರಿಗೂ ಯಾವ ವ್ಯತ್ಯಾಸ ಇದೆ. ನಾವು ಯಾಕೆ ಅಂಥವರೊಂದಿಗೆ ಇರಬೇಕು. ಇಂಥ ಭಾಷೆ ಬಳಸುವವರ ಜೊತೆ ಮೈತ್ರಿ ಮಾಡಕೊಳ್ಳಬೇಕೇ, ಬೇಡವೇ ಎನ್ನುವ ಕುರಿತು ಕಾಂಗ್ರೆಸ್‌ ನಿರ್ಧರಿಸಬೇಕು’ ಎಂದು ಆಜ್ಮಿ ಹೇಳಿದ್ದಾರೆ.

ADVERTISEMENT

ಆಘಾಡಿ ತೊರೆಯುವ ಕುರಿತು ಅಖಿಲೇಶ್‌ ಯಾದವ್‌ ಅವರು ಈವರೆಗೂ ಯಾವ ಹೇಳಿಕೆಯನ್ನೂ ನೀಡಿಲ್ಲ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ನೀಡುವಂತೆ ಸಮಾಜವಾದಿ ಪಕ್ಷವು ಆಗ್ರಹಿಸಿತ್ತು. ಆದರೆ, ಪಕ್ಷಕ್ಕೆ ಆರು ಸ್ಥಾನಗಳನ್ನು ನೀಡಲಾಗಿತ್ತು. ಈ ಸ್ಥಾನಗಳ ಪೈಕಿ ಎರಡರಲ್ಲಿ ಪಕ್ಷ ಜಯಗಳಿಸಿದೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಅಜಿತ್‌ ಪವಾರ್‌ ಸೇರಿದಂತೆ ‘ಮಹಾಯುತಿ’ ಶಾಸಕರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶನಿವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಶಿವಸೇನಾ (ಉದ್ಧವ್ ಬಣ) ಶಾಸಕ ಆದಿತ್ಯ ಠಾಕ್ರೆ ಸೇರಿದಂತೆ ಪಕ್ಷದ ಇತರ ಶಾಸಕರು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಶನಿವಾರ ಗೌರವ ಸಲ್ಲಿಸಿದರು –ಪಿಟಿಐ ಚಿತ್ರ
ಬಾಬರಿ ಮಸೀದಿ ಧ್ವಂಸ ಕುರಿತ ನಮ್ಮ ನಿಲುವೇನು ಎಂಬುದು ಸಮಾಜವಾದಿ ಪಕ್ಷಕ್ಕೆ 31 ವರ್ಷಗಳ ಬಳಿಕ ಗೊತ್ತಾಯಿತೇ? 1992ರಿಂದ ನಮ್ಮ ನಿಲುವು ಒಂದೇ. ಆಡಳಿತ ಪಕ್ಷದ ಕಡೆಗೆ ಎಸ್‌ಪಿ ವಾಲಿದೆ
ಭಾಸ್ಕರ್‌ ಜಾಧವ್‌ ಶಿವಸೇನಾ (ಉದ್ಧವ್‌ ಬಣ) ಮುಖಂಡ
ಅಬು ಆಜ್ಮಿ ಅವರು ಎಂವಿಎ ತೊರೆಯುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಮಾಜವಾದಿ ಪಕ್ಷದೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಏನು ಎಂಬುದರ ಕುರಿತು ಅರಿತುಕೊಳ್ಳಲಾಗುವುದು
ನಿತಿನ್‌ ರಾವುತ್‌ ಕಾಂಗ್ರೆಸ್‌ ಮುಖಂಡ
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುತ್ವದ ಅಜೆಂಡಾವನ್ನು ತೀವ್ರವಾಗಿ ಪ್ರತಿಪಾದಿಸಬೇಕು ಎಂದು ನಾಯಕರಿಗೆ ಸಭೆಯೊಂದರಲ್ಲಿ ಉದ್ಧವ್‌ ಹೇಳಿದ್ದಾರಂತೆ.
ಅಬು ಆಜ್ಮಿ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ
ಎಸ್‌ಪಿ ಹೊರನಡೆದರೆ ಮೈತ್ರಿಕೂಟಕ್ಕೆ ಯಾವುದೇ ನಷ್ಟವಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಸ್‌ಪಿ ಈ ನಿರ್ಧಾರ ತೆಗೆದುಕೊಂಡಿದೆ
ಅಭಯ್‌ ದೇಶಪಾಂಡೆ ರಾಜಕೀಯ ವಿಶ್ಲೇಷಕ

ಪ್ರಮಾಣವಚನ ಸ್ವೀಕರಿಸದ ಎಂವಿಎ ಶಾಸಕರು

‘ಇವಿಎಂ ಮ್ಯಾಜಿಕ್‌’ನಿಂದ ಸರ್ಕಾರ ರಚನೆಗೊಂಡಿದೆ. ಆದ್ದರಿಂದ ಅಧಿವೇಶನದ ಮೊದಲ ದಿನ ಪ್ರಮಾಣವಚನ ಸ್ವೀಕರಿಸುವುದಿಲ್ಲ’ ಎಂದು ಹೇಳಿದ ವಿರೋಧ ಪಕ್ಷದ ‘ಮಹಾ ವಿಕಾಸ ಆಘಾಡಿ’ (ಎಂವಿಎ) ಮೈತ್ರಿಕೂಟದ ಶಾಸಕರು ಶನಿವಾರ ಕಲಾಪದಿಂದ ಹೊರನಡೆದರು. ‘ಇದು ನಮ್ಮ ಪ್ರತಿಭಟನೆ’ ಎಂದು ಎಂವಿಎ ಶಾಸಕರು ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್‌ ಉಪಮುಖ್ಯಮಂತ್ರಿಗಳಾಗಿ ಅಜಿತ್‌ ಪವಾರ್‌ ಹಾಗೂ ಏಕನಾಥ ಶಿಂದೆ ಅವರು ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳ ಬಳಿಕ ‘ಮಹಾಯುತಿ’ ಶಾಸಕರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಎಂವಿಎ ಶಾಸಕರು ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿದರು. ಇವರು ಭಾನುವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಶನಿವಾರದಿಂದ ಮೂರು ದಿನಗಳವರೆಗೆ ವಿಶೇಷ ಅಧಿವೇಶನ ನಡೆಯಲಿದೆ. ಅಧಿವೇಶನಕ್ಕೂ ಮುನ್ನ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಬಳಿ ಸೇರಿದ್ದ ಎಂವಿಎ ಶಾಸಕರು ತಮ್ಮ ನಿರ್ಧಾರವನ್ನು ಘೋಷಿಸಿದರು. ಈ ವೇಳೆ ಮಾತನಾಡಿದ ಶಿವಸೇನಾ (ಉದ್ಧವ್‌ ಬಣ) ಶಾಸಕ ಆದಿತ್ಯ ಠಾಕ್ರೆ ‘ಭಾರಿ ಬಹುಮತದೊಂದಿಗೆ ಸರ್ಕಾರವು ಅಧಿಕಾರಕ್ಕೆ ಬಂದಿರುವಾಗ ಭಾರಿ ಸಂಭ್ರಮ ಇರುತ್ತದೆ. ಆದರೆ ಒಂದು ಪ್ರಶ್ನೆ ಮಾತ್ರ ಹಾಗೇ ಉಳಿಯುತ್ತದೆ. ಇಂಥ ಬಹುಮತವನ್ನು ಜನರು ನೀಡಿದ್ದೇ ಅಥವಾ ಇವಿಎಂ ಹಾಗೂ ಚುನಾವಣಾ ಆಯೋಗದ ಸಹಕಾರದಿಂದ ಗಳಿಸಿಕೊಂಡಿದ್ದೇ’ ಎಂದರು. ರಾಹುಲ್‌ ಶರದ್‌ ಪವಾರ್‌ ಭೇಟಿ ಇವಿಎಂ ಮೂಲಕ ಹೊರಬಂದ ಫಲಿತಾಂಶವನ್ನು ನಿರಾಕರಿಸಿ ಮತಪತ್ರದ ಮೂಲಕ ಅಣಕು ಮತದಾನ ಮಾಡಲು ಮುಂದಾಗಿದ್ದ ಸೋಲಾಪುರದ ಮರ್ಕಡವಾಡಿ ಗ್ರಾಮದ ಕೆಲವರನ್ನು ಬಂಧಿಸಿರುವುದು ಮತ್ತು ಗ್ರಾಮದಲ್ಲಿ ನಿಷೇಧಾಜ್ಞೆ ಹೇರಿರುವುದನ್ನು ಎಂವಿಎ ವಿರೋಧಿಸಿದೆ. ‘ಎನ್‌ಸಿಪಿ (ಶರದ್‌ ಬಣ) ಮುಖ್ಯಸ್ಥ ಶರದ್‌ ಪವಾರ್‌ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಈ ಗ್ರಾಮಕ್ಕೆ ಸದ್ಯದಲ್ಲಿಯೇ ಭೇಟಿ ನೀಡಲಿದ್ದಾರೆ’ ಎಂದು ಎನ್‌ಸಿಪಿ (ಶರದ್‌ ಬಣ) ಮುಖಂಡ ಜಿತೆಂದ್ರ ಅವ್ಹಡ್‌ ತಿಳಿಸಿದರು. ‘ಮರ್ಕಡವಾಡಿ ಗ್ರಾಮದ ಜನರ ಅಭಿಪ್ರಾಯವೇ ಇಡೀ ರಾಜ್ಯದ ಜನರ ಅಭಿಪ್ರಾಯವಾಗಿದೆ. ಇದು ಜನರಿಂದ ಆಯ್ಕೆಯಾದ ಸರ್ಕಾರವಲ್ಲ. ಜನರ ಅಭಿಪ್ರಾಯಗಳನ್ನು ಗೌರವಿಸಿ ನಾವು ಪ್ರಮಾಣವಚನ ಸ್ವೀಕರಿಸುತ್ತಿಲ್ಲ’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟದ ಅಧ್ಯಕ್ಷ ನಾನಾ ಪಟೋಲೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.