ಜೈಪುರ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತವಿಲ್ಲ ಎಂದವರಿಗೆ ಸೂಕ್ತ ಉತ್ತರ ನೀಡಲು ಮತ್ತು ಕೋವಿಡ್ ಕುರಿತು ಚರ್ಚಿಸಲು ರಾಜ್ಯಪಾಲರು ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರಾಜಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ‘ಮುಖ್ಯಮಂತ್ರಿಗಳು ಬಹುಮತ ಸಾಬೀತು ಮಾಡಲು ಬಯಸಿದ್ದಾರೆ. ಸರ್ಕಾರಕ್ಕೆ ಬಹುಮತವಿಲ್ಲ ಎಂದು ವಾದಿಸಿದವರ ಸದ್ದಡಗಿಸಲು ಮತ್ತು ಕೋವಿಡ್ ಕುರಿತು ಚರ್ಚಿಸಲು ರಾಜ್ಯಪಾಲರು ಅಧಿವೇಶನ ಕರೆಯಬೇಕು. ರಾಜ್ಯಪಾಲಕರು ತಾವು ಸಂವಿಧಾನದ ಪ್ರಕಾರ ನಡೆದುಕೊಳ್ಳುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗೆ ಟಿಪ್ಪಣಿಯೊಂದನ್ನು ನೀಡಿದ್ದಾರೆ. ಅದನ್ನು ಇನ್ನಷ್ಟೇ ಪರಾಮರ್ಶಿಸಬೇಕು. ರಾಜ್ಯಪಾಲರು ಸಂವಿಧಾನದ ವಿಧಿ 174 ಅನ್ನು ಪಾಲಿಸಬೇಕು,’ ಎಂದು ಅವರು ಆಗ್ರಹಿಸಿದರು.
‘ನಾವು ರಾಜ್ಯಪಾಲರಲ್ಲಿ ವಿಶ್ವಾಸವಿಟ್ಟಿದ್ದೇವೆ. ಸಂಪುಟ ಸಭೆ 9.30ಕ್ಕೆ ನಡೆಯಲಿದೆ. ರಾಜ್ಯಪಾಲರು ನೀಡಿದ ಟಿಪ್ಪಣಿಯನ್ನು ಅಲ್ಲಿ ಪರಾಮರ್ಶಿಸಲಾಗುತ್ತದೆ. ಸೂಕ್ತ ಪ್ರತಿಕ್ರಿಯೆನ್ನು ಅವರಿಗೆ ರವಾನಿಸಲಾಗುತ್ತದೆ,’ ಎಂದು ಸುರ್ಜೆವಾಲ ಹೇಳಿದರು.
ವಿಧಾನಸಭೆ ಅಧಿವೇಶನ ಕರೆಯುವಂತೆ ಅಶೋಕ್ ಗೆಹ್ಲೋಟ್ ಬೆಂಬಲಿಗ ಶಾಸಕರು ರಾತ್ರಿ 8 ಗಂಟೆ ವರೆಗೆ ರಾಜಭವನದಲ್ಲಿ ಧರಣಿ ನಡೆಸಿದರು. ನಂತರ ಅವರನ್ನು ಬಸ್ನಲ್ಲಿ ಹೋಟೆಲ್ಗೆ ಕರೆದೊಯ್ಯಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.