ADVERTISEMENT

ಕಲ್ಲಿದ್ದಲು ಹಗರಣ: ಮಾಜಿ ಕಾರ್ಯದರ್ಶಿ ಗುಪ್ತಾಗೆ 3 ವರ್ಷ ಜೈಲು

ದೆಹಲಿ ಹೈಕೋರ್ಟ್ ಆದೇಶ

ಪಿಟಿಐ
Published 8 ಆಗಸ್ಟ್ 2022, 14:42 IST
Last Updated 8 ಆಗಸ್ಟ್ 2022, 14:42 IST
ಎಚ್‌.ಸಿ.ಗುಪ್ತಾ
ಎಚ್‌.ಸಿ.ಗುಪ್ತಾ   

ನವದೆಹಲಿ:ಮಹಾರಾಷ್ಟ್ರದಲ್ಲಿ ಕಲ್ಲಿದ್ದಲು ಹಂಚಿಕೆ ಮಾಡುವಲ್ಲಿ ಅಕ್ರಮ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿ, ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಎಚ್‌.ಸಿ. ಗುಪ್ತಾಗೆ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು, ಸಚಿವಾಲಯದ ಮಾಜಿ ಜಂಟಿ ಕಾರ್ಯದರ್ಶಿ ಕೆ.ಎಸ್. ಕ್ರೋಫಾ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ, ₹ 50 ಸಾವಿರ ದಂಡ ಹಾಗೂ ಖಾಸಗಿ ಕಂಪನಿ ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಜಿಐಎಲ್) ನಿರ್ದೇಶಕ ಮುಖೇಶ್ ಗುಪ್ತಾ ಅವರಿಗೆ 4 ವರ್ಷ ಜೈಲುಶಿಕ್ಷೆ ಹಾಗೂ ₹ 2 ಲಕ್ಷ ದಂಡ ವಿಧಿಸಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಲೊಹಾರಾ ಈಸ್ಟ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸರ್ಕಾರಕ್ಕೆ ವಂಚಿಸಿ, ಗ್ರೇಸ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಅಕ್ರಮವಾಗಿ ಕಲ್ಲಿದ್ದಲು ಹಂಚಿಕೆ ಮಾಡಿದ್ದರು. ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.

ADVERTISEMENT

ಕಲ್ಲಿದ್ದಲು ಹಗರಣಗಳಿಗೆ ಸಂಬಂಧಿಸಿದಂತೆ ಎಚ್‌.ಸಿ.ಗುಪ್ತಾ ಅವರ ವಿರುದ್ಧ ದಾಖಲಾಗಿದ್ದ ಈ ಮೊದಲಿನ ಮೂರು ಪ್ರರಕಣಗಳಲ್ಲೂ ಅವರು ದೋಷಿ ಆಗಿದ್ದರು ಹಾಗೂ ಈ ತೀರ್ಪಿನ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅವರು ಸಲ್ಲಿಸಿದ್ದ ಅರ್ಜಿ ಬಾಕಿ ಉಳಿದಿದೆ. ಸದ್ಯ ಅವರು ಇತರ ಆರೋಪಿಗಳ ಜತೆಗೆ ಜಾಮೀನಿನ ಮೇಲೆ ಇದ್ದಾರೆ.

ಮಹಾರಾಷ್ಟ್ರದಲ್ಲಿನ ಈ ಕಲ್ಲಿದ್ದಲು ಹಂಚಿಕೆ ಹಗರಣ 2005 ಮತ್ತು 2011ರ ನಡುವೆ ನಡೆದಿತ್ತು. ಹಗರಣ ಬೆಳಕಿಗೆ ಬಂದ ಬಳಿಕ 2014ರ ಆಗಸ್ಟ್‌ 25ರಂದು ಸುಪ್ರೀಂ ಕೋರ್ಟ್ ಈ ಹಂಚಿಕೆಯನ್ನು ರದ್ದುಪಡಿಸಿತ್ತು.‌ ಇದುವರೆಗೆ ದಾಖಲಾಗಿರುವ ವಿವಿಧ ಕಲ್ಲಿದ್ದಲು ಹಗರಣಗಳಿಗೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾದ 11ನೇ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.