ADVERTISEMENT

ಕಲ್ಲಿದ್ದಲು ಹಗರಣ: ವಿಜಯ್ ದರ್ದಾ ಮತ್ತವರ ಪುತ್ರನಿಗೆ 4 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 27 ಜುಲೈ 2023, 13:28 IST
Last Updated 27 ಜುಲೈ 2023, 13:28 IST
ಜೈಲು ಶಿಕ್ಷೆ– ಪ್ರಾತಿನಿಧಿಕ ಚಿತ್ರ
ಜೈಲು ಶಿಕ್ಷೆ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಛತ್ತೀಸಗಢದ ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿನ ಭಾರಿ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ವಿಜಯ್ ದರ್ದಾ ಮತ್ತು ಅವರ ಮಗ ದೇವೇಂದ್ರ ದರ್ದಾ ಹಾಗೂ ಉದ್ಯಮಿ ಮನೋಜ್ ಕುಮಾರ್ ಜೈಸ್ವಾಲ್ ಅವರಿಗೆ ದೆಹಲಿ ನ್ಯಾಯಾಲಯವು 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ವಿಶೇಷ ನ್ಯಾಯಾಧೀಶ ಸಂಜಯ್ ಬನ್ಸಾಲ್ ಅವರು ತೀರ್ಪು ಪ್ರಕಟಿಸಿದ ನಂತರ ಎಲ್ಲಾ ಮೂವರು ಅಪರಾಧಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಅಲ್ಲದೆ, ಇದೇ ಪ್ರಕರಣದಲ್ಲಿ ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ. ಗುಪ್ತಾ ಮತ್ತು ಇಬ್ಬರು ಮಾಜಿ ಅಧಿಕಾರಿಗಳಾದ ಕೆ.ಎಸ್. ಕ್ರೋಫಾ ಮತ್ತು ಕೆ.ಸಿ. ಸಮ್ರಿಯಾ ಅವರಿಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಈ ಮೂವರು ಅಪರಾಧಿಗಳಿಗೆ ನ್ಯಾಯಾಲಯವು ವೈಯಕ್ತಿಕ ಬಾಂಡ್‌ ಆಧರಿಸಿ ಜಾಮೀನು ನೀಡಿದೆ.

ADVERTISEMENT

ಪ್ರಕರಣದಲ್ಲಿ ದೋಷಿ ಎಂದು ದೃಢಪಟ್ಟಿರುವ ಜೆಎಲ್‌ಡಿ ಯವತ್ಮಾಳ್‌ ಎನರ್ಜಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ₹50 ಲಕ್ಷ ದಂಡ ವಿಧಿಸಲಾಗಿದೆ. ಜತೆಗೆ, ವಿಜಯ್ ದರ್ದಾ, ದೇವೇಂದ್ರ ದರ್ದಾ ಹಾಗೂ ಜೈಸ್ವಾಲ್‌ ಅವರಿಗೆ ತಲಾ ₹15 ಲಕ್ಷ ಹಾಗೂ ಇತರ ಮೂವರು ಅಪರಾಧಿಗಳಿಗೆ ತಲಾ ₹20 ಸಾವಿರ ದಂಡ ವಿಧಿಸಿದೆ.

ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕಲ್ಲಿದ್ದಲು ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಜುಲೈ 13ರಂದು ಐಪಿಸಿಯ ವಿವಿಧ ಸೆಕ್ಷನ್‌ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಏಳು ಆರೋಪಿಗಳನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.