
ಬಂಧನ
(ಪ್ರಾತಿನಿಧಿಕ ಚಿತ್ರ)
ಛಿಂದ್ವಾಢ: ಮಧ್ಯಪ್ರದೇಶದಲ್ಲಿ 24 ಮಕ್ಕಳ ಸಾವಿಗೆ ಕಾರಣವಾದ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ತಯಾರಿಸಿದ್ದ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ವೈದ್ಯಕೀಯ ಪ್ರತಿನಿಧಿ ಸತೀಶ್ ವರ್ಮಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
‘ಛಿಂದ್ವಾಢದಲ್ಲಿ ಸೋಮವಾರ ಮುಂಜಾನೆ ವರ್ಮಾ ಅವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಸ್ರೇಸನ್ ಫಾರ್ಮಾ ಕಂಪನಿ ಮಾಲೀಕ ಜಿ.ರಂಗನಾಥನ್ ಹಾಗೂ ಮಕ್ಕಳಿಗೆ ಈ ಸಿರಪ್ ಶಿಫಾರಸು ಮಾಡಿದ್ದ ಡಾ.ಪ್ರವೀಣ್ ಸೋನಿ ಸೇರಿದಂತೆ ಆರು ಮಂದಿಯನ್ನು ಈವರೆಗೆ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟ 24 ಮಕ್ಕಳು ಐದು ವರ್ಷದೊಳಗಿನವರು. ‘ಕೋಲ್ಡ್ರಿಫ್’ ಸಿರಪ್ ಸೇವಿಸಿದ ಬಳಿಕ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಇದಲ್ಲದೆ, ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ತಮಿಳುನಾಡು ಸರ್ಕಾರವು ಸ್ರೇಸನ್ ಫಾರ್ಮಾಕ್ಕೆ ನೀಡಿದ್ದ ತಯಾರಿಕಾ ಪರವಾನಗಿಯನ್ನು ರದ್ದುಪಡಿಸಿ, ಕಂಪನಿಯನ್ನು ಮುಚ್ಚಿಸಿತ್ತು.
ಈ ದುರಂತದ ಬಳಿಕ, ಭಾರತದ ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್ ಮತ್ತು ರಿಲೈಫ್ ಕಂಪನಿಗಳ ಕಲುಷಿತ ಕೆಮ್ಮಿನ ಸಿರಪ್ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿತ್ತು. ಈ ಸಿರಪ್ಗಳು ವಿಶ್ವದಾದ್ಯಂತ ಎಲ್ಲಿ ಪತ್ತೆಯಾದರೂ ತಕ್ಷಣ ತಿಳಿಸುವಂತೆ ಸೂಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.