ADVERTISEMENT

ರಸ್ತೆ ಅಪಘಾತ ನಿಯಂತ್ರಣಕ್ಕೆ ಸರ್ಕಾರ ಬದ್ಧ: ಗಡ್ಕರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 15:04 IST
Last Updated 18 ಜನವರಿ 2021, 15:04 IST
ಗಡ್ಕರಿ
ಗಡ್ಕರಿ   

ನವದೆಹಲಿ: ‘2025ರೊಳಗೆ ದೇಶದಲ್ಲಿ ರಸ್ತೆ ಅಪಘಾತ ಪ್ರಮಾಣವನ್ನು ಶೇ 50 ರಷ್ಟು ತಗ್ಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘2030ರ ವೇಳೆಗೆ ಶೂನ್ಯ ರಸ್ತೆ ಅಪಘಾತಗಳನ್ನು ಸಾಧಿಸುವ ಗುರಿಯನ್ನು ಕಳೆದ ವರ್ಷ ಸ್ವೀಡನ್‌ನಲ್ಲಿ ನಡೆದ ಸಮ್ಮೇಳದಲ್ಲಿ ಭಾರತ ಪ್ರತಿಪಾದಿಸಿದೆ’ ಎಂದರು.

‘ರಸ್ತೆ ಅಪಘಾತಗಳನ್ನು ಶೇ 50ರಷ್ಟು ನಿಯಂತ್ರಿಸುತ್ತೇವೆ ಎಂದು ಭರವಸೆ ನೀಡಿದ್ದೇವು. ತಮಿಳುನಾಡಿನಲ್ಲಿ ಅಪಘಾತ ನಿಯಂತ್ರಣದ ಪ್ರಮಾಣ ಶೇ 53ರಷ್ಟಿದೆ. 2030ರವರೆಗೆ ಕಾಯುತ್ತಿದ್ದರೆ, 6–7 ಲಕ್ಷ ಜನ ಸಾಯುತ್ತಾರೆ. ಹಾಗಾಗಿ, ಜನರ ಭಾಗವಹಿಸುವಿಕೆಯ ಮೂಲಕ 2025ರೊಳಗೆ ಅಪಘಾತಗಳ ಪ್ರಮಾಣವನ್ನು ಶೇಕಡ 50 ರಷ್ಟು ತಗ್ಗಿಸಲು ನಾವು ಬದ್ಧರಾಗಿದ್ದೇವೆ’ ಎಂದರು.

ADVERTISEMENT

ರಸ್ತೆ ಸುರಕ್ಷತೆಯ ಅರಿವು ಮೂಡಿಸಲು ಸರ್ಕಾರಿ ಇಲಾಖೆ, ಎನ್‌ಜಿಒ ಸೇರಿದಂತೆ ಇತರ ಸಂಘ ಸಂಸ್ಥೆಗಳು ನೆರವಾಗಬೇಕು ಎಂದರು.

ಪ್ರತಿದಿನ 30 ಕಿ.ಮೀ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಮಾರ್ಚ್‌ ಅಂತ್ಯದ ವೇಳೆ ನಿತ್ಯ 40 ಕಿ.ಮೀ ಹೆದ್ದಾರಿ ನಿರ್ಮಿಸಲಾಗುವುದು ಎಂದು ಇದೇ ವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.