ADVERTISEMENT

ಮೋದಿಗೆ ನಿಷ್ಠೆ ತೋರಲು ರಾಜ್ಯಪಾಲರ ಸ್ಪರ್ಧೆ: ಮಲ್ಲಿಕಾರ್ಜುನ ಖರ್ಗೆ ಟೀಕೆ

ಪಿಟಿಐ
Published 31 ಜನವರಿ 2023, 15:20 IST
Last Updated 31 ಜನವರಿ 2023, 15:20 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ದೇಶದಲ್ಲಿ ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಚು ನಿಷ್ಠೆ ತೋರಿಸಲು ಪರಸ್ಪರ ಪೈಪೋಟಿಗೆ ಇಳಿದಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದರು.

ಬಜೆಟ್ ಅಧಿವೇಶನದಲ್ಲಿ ಅದಾನಿ ವಿಷಯ, ಗಡಿಯಲ್ಲಿ ಚೀನಾ ಅತಿಕ್ರಮಣ, ಹೆಚ್ಚಿದ ಹಣದುಬ್ಬರ, ನಿರುದ್ಯೋಗ ಸಮಸ್ಯೆ ಹಾಗೂ ರಾಜ್ಯಪಾಲರ ಪಾತ್ರದ ಬಗ್ಗೆ ಬಜೆಟ್‌ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಸಂಘಟಿತ ಧ್ವನಿ ಎತ್ತಲಿವೆ ಎಂದು ಅವರು ಹೇಳಿದರು.

ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನುಸರಿಸಿರುವ ಕ್ರಮಗಳಿಗೆ ಆಕ್ಷೇಪಣೆ ವ್ಯಕ್ತಪಡಿಸಿದ ಖರ್ಗೆ, ರಾಜ್ಯಪಾಲರ ಪಾತ್ರ ಮತ್ತು ವಿರೋಧ ಪಕ್ಷಗಳ ಸರ್ಕಾರಗಳು ಇರುವ ರಾಜ್ಯಗಳಲ್ಲಿ ರಾಜ್ಯಪಾಲರು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಅವಕಾಶ ಕೋರಲಾಗಿದೆ ಎಂದರು.

ADVERTISEMENT

ಅಮೆರಿಕದ ಹಿಂಡೆನ್‌ಬರ್ಗ್‌ ಸಂಸ್ಥೆಯು ಹೊರಗೆಡವಿದ ಸಂಶೋಧನಾ ವರದಿಯಿಂದ ಷೇರುಪೇಟೆಯಲ್ಲಿ ನೆಲಕಚ್ಚಿರುವ ಅದಾನಿ ಸಮೂಹದ ಆರ್ಥಿಕ ಅಕ್ರಮಗಳ ಬಗ್ಗೆಯೂ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದರು.

ಸುಮಾರು 30 ಕೋಟಿ ಜನರು ತಮ್ಮ ಭವಿಷ್ಯದ ಭದ್ರತೆಗೆ ಎಲ್ಐಸಿ ವಿಮೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆದರೆ, ಈಗ ಅವರು ತಮ್ಮ ಉಳಿತಾಯ ಹಣ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಈ ಬಗ್ಗೆಯೂ ಧ್ವನಿ ಎತ್ತಲು ವಿಪಕ್ಷಗಳು ಜಂಟಿ ಕಾರ್ಯತಂತ್ರ ರೂಪಿಸಿವೆ ಎಂದು ಖರ್ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.