ADVERTISEMENT

ದಿಗ್ವಿಜಯ್ ಪರ ಸಂತರ ಪ್ರಚಾರ

ಪಿಟಿಐ
Published 9 ಮೇ 2019, 17:12 IST
Last Updated 9 ಮೇ 2019, 17:12 IST
ದಿಗ್ವಿಜಯ್‌ ಸಿಂಗ್‌ ಪರ ಪ್ರಚಾರ ನಡೆಸುತ್ತಿರುವ ನಾಮದೇವದಾಸ್‌ ತ್ಯಾಗಿ ಅವರು ಮಂಗಳವಾರ ಭೋಪಾಲದಲ್ಲಿ ವಿಶೇಷ ಪೂಜೆ ನೆರವೇರಿಸಿದರು
ದಿಗ್ವಿಜಯ್‌ ಸಿಂಗ್‌ ಪರ ಪ್ರಚಾರ ನಡೆಸುತ್ತಿರುವ ನಾಮದೇವದಾಸ್‌ ತ್ಯಾಗಿ ಅವರು ಮಂಗಳವಾರ ಭೋಪಾಲದಲ್ಲಿ ವಿಶೇಷ ಪೂಜೆ ನೆರವೇರಿಸಿದರು   

ಭೋಪಾಲ್‌: ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಪರವಾಗಿ ಪ್ರಚಾರ ನಡೆಸಲು ನೂರಾರು ಸಾಧುಗಳು ಮಂಗಳವಾರ ಭೋಪಾಲ್‌ಗೆ ಬಂದಿದ್ದಾರೆ.

ಬಿಜೆಪಿ ಆಡಳಿತದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದು, ಟಿಕೆಟ್‌ ನಿರಾಕರಣೆಯ ಕಾರಣಕ್ಕೆ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಮದೇವ್‌ ದಾಸ್‌ ತ್ಯಾಗಿ ಅಲಿಯಾಸ್‌ ಕಂಪ್ಯೂಟರ್‌ ಬಾಬಾ ಅವರ ನೆತೃತ್ವದಲ್ಲಿ ನಗರಕ್ಕೆ ಬಂದಿರುವ ಸಾಧುಗಳು, ಮೂರು ದಿನಗಳ ಕಾಲ ಇಲ್ಲಿದ್ದು ಪ್ರಜ್ಞಾ ಸಿಂಗ್‌ ವಿರುದ್ಧ ಪ್ರಚಾರ ನಡೆಸಲಿದ್ದಾರೆ. ನಗರದಲ್ಲಿ ಮಂಗಳವಾರ ಅವರು ಹಟಯೋಗ ಹಾಗೂ ರೋಡ್‌ ಶೋ ನಡೆಸಿದರು.

‘ಐದು ವರ್ಷಗಳಲ್ಲಿ ರಾಮ ಮಂದಿರ ನಿರ್ಮಿಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಮಂದಿರ ಇಲ್ಲದಿದ್ದರೆ ಮೋದಿಯೂ ಬೇಡ’ ಎಂದು ಬಾಬಾ ಹೇಳಿದ್ದಾರೆ. ಸ್ವಯಂಘೋಷಿತ ದೇವಮಾನವ ಕಂಪ್ಯೂಟರ್‌ ಬಾಬಾ ಅವರನ್ನು ರಾಜ್ಯದ ಕಾಂಗ್ರೆಸ್‌ ಸರ್ಕಾರವು ‘ನದಿ ಪ್ರಾಧಿಕಾರ’ದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ADVERTISEMENT

‘ಅವರು (ಬಿಜೆಪಿ) ಜನರನ್ನು ವಂಚಿಸಿದ್ದಾರೆ. ಸಂತರನ್ನೂ ಬಿಟ್ಟಿಲ್ಲ. ಈ ಬಾರಿಯೂ ಜನರನ್ನು ವಂಚಿಸಲು ಸಾಧ್ಯವಾಗದು. ಈ ಬಾರಿ ದಿಗ್ವಿಜಯ್‌ ಸಿಂಗ್‌ ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಲಿದ್ದಾರೆ’ ಎಂದು ಬಾಬಾ ವಿಶ್ವಾಸ ವ್ಯಕ್ತಪಡಿಸಿದರು. ಪ್ರಜ್ಞಾ ಸಿಂಗ್‌ ಅವರನ್ನು ಟೀಕಿಸುತ್ತಾ, ‘ಕಾವಿ ವಸ್ತ್ರ ಧರಿಸಿದ ಮಾತ್ರಕ್ಕೆ ಯಾರೂ ಸಂತರಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.