ನವದೆಹಲಿ: ಅಮೆರಿಕದಲ್ಲಿ ನೆಲಸಿದ್ದ ಭಾರತೀಯರನ್ನು ಪನಾಮಾಗೆ ಗಡೀಪಾರು ಮಾಡಿರುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಶುಕ್ರವಾರ ವಾಗ್ದಾಳಿ ನಡೆಸಿದೆ.
‘ಇಷ್ಟು ಅಮಾನವೀಯವಾಗಿ ನಡೆಸಿಕೊಳ್ಳಲು ಪ್ರಧಾನಿ ಮೋದಿ ಏಕೆ ಅವಕಾಶ ನೀಡುತ್ತಿದ್ದಾರೆ. ಇದು ದೇಶಕ್ಕೆ ಮಾಡುತ್ತಿರುವ ಅವಮಾನ’ ಎಂದು ಕಿಡಿಕಾರಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ‘ಭಾರತೀಯರನ್ನು ಮರಳಿ ಭಾರತಕ್ಕೆ ಕಳುಹಿಸುವ ಬದಲಾಗಿ ಪನಾಮಾಗೆ ಕಳುಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಿನ ಭೇಟಿ ವೇಳೆ ಏನು ಒಪ್ಪಂದವಾಗಿದೆ? ಉಭಯ ದೇಶಗಳ ನಾಯಕರು ಭೇಟಿಯಾದ ಒಂದೇ ವಾರದಲ್ಲಿ ಭಾರತದ ನಾಗರಿಕರನ್ನು ಲ್ಯಾಟಿನ್ ಅಮೆರಿಕ ದೇಶಗಳಿಗೆ ಕಳುಹಿಸಲಾಗಿದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಅಮೆರಿಕವು ಭಾರತೀಯರನ್ನು ಪನಾಮಾಗೆ ಗಡೀಪಾರು ಮಾಡಿರುವ ಬಗ್ಗೆ ಪನಾಮಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಗುರುವಾರ ಮಾಹಿತಿ ನೀಡಿದೆ. ಆದರೆ ಎಷ್ಟು ಮಂದಿ ಭಾರತೀಯರನ್ನು ಗಡೀಪಾರು ಮಾಡಲಾಗಿದೆ ಎಂದು ಅದು ತಿಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.