ನವದೆಹಲಿ: ಬಿಜೆಪಿಗೆ ವಿರುದ್ಧವಾಗಿ ಸಮರ್ಥ ಪರ್ಯಾಯ ರಾಜಕೀಯ ರೂಪಿಸಲು ಕಾಂಗ್ರೆಸ್ ಸಂಘಟನೆಯ ಎಲ್ಲ ಮಟ್ಟದಲ್ಲೂ ವ್ಯಾಪಕ ಸುಧಾರಣೆಯ ಅಗತ್ಯವಿದೆ ಎಂದು ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತಕ್ಕೆ ಪುನಃ ಚೇತರಿಸಿಕೊಂಡ ಕಾಂಗ್ರೆಸ್ ಪಕ್ಷದ ಅಗತ್ಯವಿದೆ. ಅದಕ್ಕಾಗಿ ಜಡತ್ವವನ್ನು ಬಿಟ್ಟು ಸಕ್ರಿಯವಾಗಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವ ಮನಸ್ಥಿತಿ ಇದೆ ಎಂದು ಕಾಂಗ್ರೆಸ್ ತೋರಿಸಿಕೊಳ್ಳಬೇಕಾಗಿದೆ ಎಂದು ಕೇಂದ್ರ ಮಾಜಿ ಸಚಿವರು ಹೇಳಿದ್ದಾರೆ.
ಇದು ಸಂಭವಿಸಬೇಕಾದರೆ ಕೇಂದ್ರ ಹಾಗೂ ರಾಜ್ಯ ಸಂಘಟನಾ ವಲಯದಲ್ಲಿ ವ್ಯಾಪಕ ಸುಧಾರಣೆಗಳನ್ನು ಮಾಡಬೇಕಿದೆ. ಈ ಮೂಲಕ ಪಕ್ಷವು ಸಂಘಟನಾ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸಾಬೀತು ಮಾಡಬೇಕು ಎಂದಿದ್ದಾರೆ.
ಕೋವಿಡ್ನಿಂದಾಗಿ ನಿಂತು ಹೋಗಿರುವ ಕಾಂಗ್ರೆಸ್ ಸಂಘಟನೆಯ ಚುನಾವಣೆಯು ಸದ್ಯದಲ್ಲೇ ನಡೆಯಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಚುನಾವಣಾ ಸೋಲನ್ನು ವಿಮರ್ಶಿಸಲು ಸಮಿತಿ ರಚಿಸುವುದು ಒಳ್ಳೆಯದು. ಆದರೆ ಅದು ಸೂಚಿಸುವ ಪರಿಹಾರಗಳನ್ನು ಅನುಷ್ಠಾನಗೊಳಿಸದಿದ್ದರೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿರುವ ಜಿತಿನ್ ಪ್ರಸಾದ ಬಗ್ಗೆ ಪ್ರತಿಕ್ರಿಯಿಸಿರುವ ಸಿಬಲ್, ರಾಜಕೀಯ ಲಾಭಕ್ಕಾಗಿ ಅವರು ಪಕ್ಷ ತೊರೆದಿದ್ದು, ಬಿಜೆಪಿಯಿಂದ 'ಪ್ರಸಾದ' ದೊರಕಿದೆಯೇ ಎಂದು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.