ನವದೆಹಲಿ: ‘ಮತಕಳವು’ ವಿರುದ್ಧದ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿರುವ ಕಾಂಗ್ರೆಸ್ ಆಗಸ್ಟ್ 14ರಂದು ‘ಲೋಕತಂತ್ರ ಉಳಿಸಿ’ ಎಂಬ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು ಮತ್ತು ಇತರ ಘಟಕಗಳ ಅಧ್ಯಕ್ಷರ ಜೊತೆ ಮಂಗಳವಾರ ಸಭೆ ನಡೆಸಿದರು. ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಜೈರಾಮ್ ರಮೇಶ್ ಮತ್ತು ಕೆ.ಸಿ ವೇಣುಗೋಪಾಲ್ ಭಾಗಿಯಾಗಿದ್ದರು.
‘ಮತ ಕಳವಿನ ವಿರುದ್ಧದ ಹೋರಾಟವನ್ನು ಜನರ ಬಳಿ ತಲುಪಿಸಲು ಮೂರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಆಗಸ್ಟ್ 14ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಲೋಕತಂತ್ರ ಉಳಿಸಿ’ ಮೆರವಣಿಗೆಯು ನಡೆಯಲಿದೆ’ ಎಂದು ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಅವರು ಸಭೆಯ ಬಳಿಕ ತಿಳಿಸಿದ್ದಾರೆ.
‘ಆಗಸ್ಟ್ 22ರಿಂದ ಸಪ್ಟೆಂಬರ್ 7ರ ನಡುವೆ ‘ಮತ ಕಳವು, ಅಧಿಕಾರ ಕಳವು’ ಎಂಬ ರ್ಯಾಲಿ ನಡೆಯಲಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಮತದಾನದ ಹಕ್ಕನ್ನು ರಕ್ಷಿಸಲು ಅಭಿಯಾನವನ್ನು ನಡೆಸಲಿದ್ದೇವೆ. ಇದರಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳು ಭಾಗಿಯಾಗಲಿವೆ’ ಎಂದು ಹೇಳಿದ್ದಾರೆ.
‘ಮತ ಕಳವಿನ ಬಗ್ಗೆ ಹೆಚ್ಚು ಸಾಕ್ಯ್ಯಗಳು ಲಭ್ಯವಾಗುತ್ತಿದ್ದಂತೆ ಇದು ಕಳ್ಳತನವಲ್ಲ ದರೋಡೆ ಎಂಬುವುದು ಅರಿವಾಗುತ್ತಿದೆ ಎಂದು ಖರ್ಗೆ ಅವರು ಹೇಳಿದ್ದಾರೆ’ ಎಂದು ಕನ್ಹಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.