ADVERTISEMENT

ಸೋಲುವ ಭೀತಿಯಿಂದ ಇ.ಡಿ. ದಾಳಿ: ಕಾಂಗ್ರೆಸ್‌

ಪಿಟಿಐ
Published 8 ಡಿಸೆಂಬರ್ 2018, 18:21 IST
Last Updated 8 ಡಿಸೆಂಬರ್ 2018, 18:21 IST
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ   

ನವದೆಹಲಿ: ರಾಜಸ್ಥಾನದ ಬಿಕಾನೇರ್‌ ಭೂಹಗರಣ ಮತ್ತು ತಲೆಮರೆಸಿಕೊಂಡಿರುವ ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್‌ ಭಂಡಾರಿ ಪ್ರಕರಣದಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧರಿಸಿ ರಾಬರ್ಟ್ ವಾದ್ರಾ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ಬಿಜೆಪಿ ಎದುರಾಳಿಗಳನ್ನು ಬೆದರಿಸಲು ಇಂತಹ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ದೇಶದಲ್ಲಿ ಸಂವಿಧಾನದ ನೆರಳಿನಲ್ಲಿಯೇ ಭಯ ಹುಟ್ಟಿಸುವ ಆಡಳಿತ ನಡೆಯುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಆರೋಪಿಸಿದ್ದಾರೆ.

ADVERTISEMENT

ಸಿಬಿಐ, ಆರ್‌ಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದಂತಹ ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ಗರಿಷ್ಠ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪವನ್‌ ಖೇರ್‌ ಅವರು ದೂರಿದರು.

ಮತಗಟ್ಟೆ ಸಮೀಕ್ಷೆ ಮತ್ತು ಆಂತರಿಕ ಸಮೀಕ್ಷೆಗಳಿಂದ ಬಿಜೆಪಿಯಲ್ಲಿ ಸೋಲಿನ ಭೀತಿ ಆವರಿಸಿದೆ. ಹೀಗಾಗಿ ಏಕಾಏಕಿ ಕಾಂಗ್ರೆಸ್‌ ನಾಯಕರು ಮತ್ತು ಅವರ ನಿಕಟವರ್ತಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

****

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಮುಖವಾಡ ಕಳಚಿ ಬೀಳಲಿದೆ.

- ಅಭಿಷೇಕ್‌ ಮನು ಸಿಂಘ್ವಿ,ಕಾಂಗ್ರೆಸ್‌ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.