ನವದೆಹಲಿ: ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವಕೇಂದ್ರ ಸರ್ಕಾರವುಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಒಳಗೊಂಡಂತೆ ಕಾಂಗ್ರೆಸ್ ಸಂಸದರು ಉಭಯ ಸದನ ಗಳಿಂದ ಪ್ರತಿಪಕ್ಷಗಳ ಸಂಸದರ ಅಮಾ ನತು ಖಂಡಿಸಿಘೋಷಣೆ ಕೂಗಿದರು.
ಸಂಸದರು ಸಂಸತ್ ಭವನದ ಆವರಣದಿಂದ ವಿಜಯ್ ಚೌಕ್ವರೆಗೆ ಮೆರವಣಿಗೆ ನಡೆಸಿ, ಅಲ್ಲಿ ಧರಣಿ ಕುಳಿತರು.ಬೆಲೆ ಏರಿಕೆ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳಿಗೆ ಜಿಎಸ್ಟಿ ವಿಧಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರನ್ನುಪೊಲೀಸರು ವಶಕ್ಕೆ ಪಡೆದರು.
‘ಜಾರಿ ನಿರ್ದೇಶನಾಲಯ ಸೇರಿದಂತೆ ತನಿಖಾ ಸಂಸ್ಥೆಗಳ ದುರ್ಬಳಕೆ ಹಾಗೂ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮುಂದುವರಿಸುತ್ತೇವೆ. ಸಂಸದರನ್ನು ಸದನದಿಂದ ಅಮಾನತು ಮಾಡಿದ್ದು ಸರಿಯಲ್ಲ. ತಕ್ಷಣ ಆದೇಶ ಹಿಂಪಡೆ ಯಬೇಕು’ ಎಂದು ಖರ್ಗೆ ಅವರು ಒತ್ತಾಯಿಸಿದರು.ತನಿಖಾ ಸಂಸ್ಥೆಗಳನ್ನು ಸರ್ಕಾರ ಬಳಸಿಕೊಳ್ಳುತ್ತಿರುವ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದ ಚೌಧರಿ ಅವರು, ‘ಪ್ರತಿಪಕ್ಷಮುಕ್ತ ಭಾರತ ನಿರ್ಮಿಸುವುದು ಸರ್ಕಾರದ ಉದ್ದೇಶ ಎಂಬಂತೆ ತೋರುತ್ತಿದೆ’ ಎಂದು ಆರೋಪಿಸಿದರು.
ಪ್ರತಿಭಟನಕಾರರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು. ‘ಇಂದು ನಮ್ಮ ಎಲ್ಲ ಸಂಸದರನ್ನು ವಶಕ್ಕೆ ಪಡೆಯಲಾಗಿದೆ. ನಾವು ಸಂಸತ್ತಿನಲ್ಲಿ ಚರ್ಚೆ ಮಾಡಲು ಒತ್ತಾಯಿಸಿದರೆ, ಸರ್ಕಾರ ಅದಕ್ಕೆ ಅವಕಾಶ ನೀಡುತ್ತಿಲ್ಲ. ಇದು ರಾಜಕೀಯ ದುರುದ್ದೇಶದ ಕ್ರಮ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದರು.
ಹರಿದ ಬಟ್ಟೆ–ಸಂಸದೆ ಆರೋಪ: ದೆಹಲಿಯ ಕಾಂಗ್ರೆಸ್ ಕಚೇರಿ ಹೊರಗಡೆ ಪ್ರತಿಭಟನೆ ನಡೆಸಿದ ಮಹಿಳಾ ಹಾಗೂ ಯುವ ಕಾಂಗ್ರೆಸ್ ಘಟಕಗಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರು ವಶಕ್ಕೆ ಪಡೆಯುವಾಗ ತಮ್ಮ ಬಟ್ಟೆ ಹರಿಯಿತು ಎಂದು ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಆರೋಪಿಸಿದ್ದಾರೆ. ಪೊಲೀಸರು ತಮ್ಮನ್ನು ವಾಹನದೊಳಕ್ಕೆ ಕಳುಹಿಸುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಿರುವ ಅವರು, ಈ ವೇಳೆ ತಮ್ಮ ಬಟ್ಟೆ ಹರಿಯಿತು ಎಂದು ಹೇಳಿದ್ದಾರೆ.
‘ಪ್ರತಿಭಟನೆ ನಡೆಸಿದ್ದೇವೆಯೇ ಹೊರತು, ಸದನದ ಘನತೆಗೆ ಕುಂದು ತರುವ ರೀತಿಯಲ್ಲಿ ನಡೆದುಕೊಂಡಿಲ್ಲ. ಆದರೂ ನಮ್ಮನ್ನು ಅಮಾನತು ಮಾಡ ಲಾಗಿದೆ. ಮಹಿಳಾ ಸಂಸದರನ್ನು ಪದೇ ಪದೇ ಈ ರೀತಿ ನಡೆಸಿಕೊಳ್ಳಬೇಕಾ? ನಮಗೂ ಘನತೆಯಿಲ್ಲವೇ?’ ಎಂದು ಜ್ಯೋತಿಮಣಿ ಟ್ವೀಟ್ ಮಾಡಿದ್ದಾರೆ.
‘ಜನಪ್ರತಿನಿಧಿಗಳನ್ನು ಸರ್ಕಾರವು ‘ಕ್ರಿಮಿನಲ್’ಗಳ ರೀತಿ ನಡೆಸಿಕೊಳ್ಳುತ್ತಿದೆ. ಇದು ನಿಜಕ್ಕೂ ಅಸಂಸದೀಯ ನಡವಳಿಕೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.