ADVERTISEMENT

ರೈತರ ಪ್ರತಿಭಟನೆ ಹತ್ತಿಕ್ಕಲು ಬಿಜೆಪಿಯಿಂದ ಜಾತಿ ರಾಜಕಾರಣ: ಕಾಂಗ್ರೆಸ್ ಆರೋಪ

ಪಿಟಿಐ
Published 14 ಸೆಪ್ಟೆಂಬರ್ 2021, 15:06 IST
Last Updated 14 ಸೆಪ್ಟೆಂಬರ್ 2021, 15:06 IST
   

ಲಖನೌ: ಸ್ವಾತಂತ್ರ್ಯ ಹೋರಾಟಗಾರ ರಾಜ ಮಹೇಂದ್ರ ಪ್ರತಾಪ್ ಸಿಂಹ ಅವರ ಹೆಸರನ್ನು ಬಳಸಿಕೊಂಡು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುವ ರೈತರ ಒಗ್ಗಟ್ಟನ್ನು ಮುರಿಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಆಡಳಿತ ಪಕ್ಷವು ಜಾತಿವಾದಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸ್ವಾತಂತ್ರ್ಯ ಹೋರಾಟಗಾರನ ಹೆಸರಿನಲ್ಲಿ ಅಲೀಗಢದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವವಿದ್ಯಾಲಯದ ಅಡಿಪಾಯ ಹಾಕಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೇಳಿಕೆ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ವಕ್ತಾರ ಹಿಲಾಲ್ ಮಾತನಾಡಿ, 'ಸ್ವಾತಂತ್ರ್ಯ ಹೋರಾಟಗಾರ ರಾಜ ಮಹೇಂದ್ರ ಪ್ರತಾಪ್ ಸಿಂಹ ಆರ್‌ಎಸ್‌ಎಸ್ ಅನ್ನು ಫ್ಯಾಸಿಸ್ಟ್ ಎಂದು ಕರೆದಿದ್ದರು ಮತ್ತು ಅವರ ಜೀವನದುದ್ದಕ್ಕೂ ಅದರ ವಿರುದ್ಧವೇ ಹೋರಾಡಿದ್ದರು. ವಾಸ್ತವವಾಗಿ, 1957 ರ ಸಂಸತ್ ಚುನಾವಣೆಯಲ್ಲಿ ರಾಜ ಮಹೇಂದ್ರ ಪ್ರತಾಪ್ ಸಿಂಹ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸುವುದಲ್ಲದೆ, ವಾಯಪೇಯಿ ಅವರು ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದರು' ಎಂದು ಹೇಳಿದರು.

ADVERTISEMENT

'ರೈತರ ಮುತ್ತಿಗೆಯಿಂದ ತೊಂದರೆಗೊಳಗಾಗಿರುವ ಕೇಂದ್ರದ ಮೋದಿ ಸರ್ಕಾರ ಮತ್ತು ಉತ್ತರ ಪ್ರದೇಶದಲ್ಲಿನ ಯೋಗಿ ಸರ್ಕಾರ ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವ ಬದಲು ಮಹಾನ್ ಕ್ರಾಂತಿಕಾರಿ ಮಹೇಂದ್ರ ಪ್ರತಾಪ್ ಅವರನ್ನು 'ಜಾಟ್ ರಾಜ' ಎಂದು ಕರೆಯುವ ಮೂಲಕ ಜಾತಿವಾದಿ ರಾಜಕಾರಣದ ಮೂಲಕ ಅವರ ಒಗ್ಗಟ್ಟನ್ನು ಮುರಿಯಲು ಬಯಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಅಲೀಗಢದಲ್ಲಿ ವಿಶ್ವವಿದ್ಯಾನಿಲಯದ ಶಿಲಾನ್ಯಾಸದ ನಂತರ ಮಾತನಾಡಿದ ಮೋದಿ, ಈ ಹಿಂದೆ ಗೌರವಿಸದ ಕ್ರಾಂತಿಕಾರಿಗಳಿಗೆ ಈಗ ಸರಿಯಾದ ಗೌರವವನ್ನು ನೀಡಲಾಗುತ್ತಿದೆ ಎಂದಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ರಾಜಾ ಮಹೇಂದ್ರ ಪ್ರತಾಪ ಸಿಂಹರನ್ನು ಬಿಜೆಪಿ ಈಗ ನೆನಪಿಸಿಕೊಂಡಿದೆ ಎಂದು ದೂರಿದರು.

ಬಿಜೆಪಿಯ ದೃಷ್ಟಿಯಲ್ಲಿ, ಪ್ರತಿಯೊಬ್ಬ ಮಹಾನ್ ವ್ಯಕ್ತಿತ್ವವು ತನ್ನ ಮತಗಳಿಕೆಯ 'ಪಾನ್' ಆಗಿದೆ. ಬಿಜೆಪಿಯ ರಾಜಕೀಯವು ರಾಜ ಮಹೇಂದ್ರ ಪ್ರತಾಪ್ ಸಿಂಹ ಅವರ ಆದರ್ಶಗಳಿಗೆ ವಿರುದ್ಧವಾಗಿದೆ. ಹಿಂದೂ ಮತ್ತು ಮುಸ್ಲಿಮರು ಜಗಳವಾಡುವಂತೆ ಮಾಡುವ ಮೂಲಕ ಬಿಜೆಪಿ ನಿರಂತರವಾಗಿ ಮತಗಳನ್ನು ಪಡೆಯುತ್ತಿದೆ. ರಾಜ ಮಹೇಂದ್ರ ಪ್ರತಾಪ್ ಸಿಂಹ ಅವರು, ಹಿಂದೂಗಳು ಮತ್ತು ಮುಸ್ಲಿಮರು ಸಹೋದರರಂತೆ ಬದುಕುವ ಭಾರತವನ್ನು ಬಯಸಿದ್ದರು' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.