
ನವದೆಹಲಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಮನರೇಗಾ) ರದ್ದು ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರ ಹಾಗೂ ಭೂಹೀನರ ಅನ್ನ ಕಸಿಯುವ ಕುತಂತ್ರ ನಡೆಸಿದೆ ಎಂದು ಎಐಸಿಸಿ ಪರಿಶಿಷ್ಟ ಜಾತಿ ಘಟಕ (ಎಸ್ಸಿ) ಆಕ್ರೋಶ ವ್ಯಕ್ತಪಡಿಸಿದೆ.
ಎಐಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಎಐಸಿಸಿ ಪರಿಶಿಷ್ಟ ಜಾತಿ ಘಟಕದ ರಾಷ್ಟ್ರೀಯ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಎಸ್ಸಿ ಘಟಕದ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್, ‘ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್’ (ಗ್ರಾಮೀಣ್) (ಜಿ ರಾಮ್ ಜಿ) ಮಸೂದೆಯ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸ್ವಾಯತ್ತತೆಗೆ ಧಕ್ಕೆ ತಂದಿದೆ. ರಾಜ್ಯಗಳ ಮೇಲಿನ ಹೊರೆ ಹೆಚ್ಚಾಗಿದೆ. ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಕಿತ್ತು ಹಾಕುವ ಮೂಲಕ ಯೋಜನೆಯ ಆತ್ಮವನ್ನೇ ಕಿತ್ತು ಹಾಕಿದೆ‘ ಎಂದು ಕಿಡಿಕಾರಿದರು.
‘ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಅನೇಕ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡಿ ದ್ವೇಷದ ರಾಜಕಾರಣದಲ್ಲಿ ತೊಡಗಿದೆ. ನರೇಂದ್ರ ಮೋದಿ ಸರ್ಕಾರವು ಹೆಸರು ಬದಲಾವಣೆ ಮಾಡುವ ಸರ್ಕಾರವಾಗಿದ್ದು, ಬಡವರು, ಶೋಷಿತರಿಗೆ ಹಾಗೂ ದಲಿತರಿಗೆ ಅನ್ಯಾಯ ಮಾಡುತ್ತಿದೆ‘ ಎಂದು ಅವರು ದೂರಿದರು.
ಎಐಸಿಸಿ ರಾಷ್ಟ್ರೀಯ ಸಂಯೋಜಕ ಆನಂದ ಕುಮಾರ್ ಮಾತನಾಡಿ, ‘ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಗಳಿಗೆ ತಿಲಾಂಜಲಿ ಇಡುತ್ತಿರುವ ಬಿಜೆಪಿ ಸರ್ಕಾರವು ಬಡವರ ಹಾಗೂ ದಲಿತರ ವಿರೋಧಿ. ಆರ್ಎಸ್ಎಸ್ ಪ್ರೇರಿತ ನೀತಿಗಳಿಂದ ನೇಮಕಾತಿಯಲ್ಲಿ ದಲಿತರಿಗೆ ಅನ್ಯಾಯವಾಗುತ್ತಿದೆ‘ ಎಂದರು.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಹಸ್ರಾರು ಕೋಟಿ ಲೂಟಿ ಆಗುತ್ತಿದೆ. ಈ ಮಾಫಿಯಾ ವಿರುದ್ಧ ಮತ ಕಳವಿನ ಮಾದರಿಯಲ್ಲೇ ಹೋರಾಟ ಮಾಡುವ ಅಗತ್ಯ ಇದೆ ಎಂದರು.