ನವದೆಹಲಿ: ಕಾಂಗ್ರೆಸ್ ಮೇಲೆ ದಾಳಿ ಮಾಡುವ ಹುನ್ನಾರದಲ್ಲಿ ಭೋಪಾಲ್ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ನಾಥುರಾಂ ಗೋಡ್ಸೆ ಅವರನ್ನು ದೇಶಭಕ್ತ ಎಂದು ಪ್ರಸ್ತಾಪಿಸಿರುವುದು ಮಗದೊಮ್ಮೆ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಎಂದಿಗೂ ದೇಶಭಕ್ತರನ್ನು ನಿಂದಿಸುತ್ತಲೇ ಬಂದಿದೆ ಎಂದು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ವಾಗ್ದಾಳಿ ನಡೆಸಿದರು.
ಗೋಡ್ಸೆ ದೇಶದ ಮೊದಲ ಭಯೋತ್ಪಾದಕ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಆರೋಪದ ಬೆನ್ನಲ್ಲೇ ಪ್ರಜ್ಞಾ ಸಿಂಗ್ ಠಾಕೂರ್ ಈ ರೀತಿಯಾದ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಎಂದಿಗೂ ದೇಶಭಕ್ತರನ್ನು ನಿಂದಿಸುತ್ತಲೇ ಬಂದಿದ್ದು, 'ಕೇಸರಿ ಉಗ್ರರು' ಎಂದು ಕರೆದಿದೆ. ಇದಕ್ಕಿಂತಲೂ ಕೆಟ್ಟದ್ದೇನೂ ಇಲ್ಲ ಮತ್ತು ಈ ವಿಷಯದ ಬಗ್ಗೆ ಹೆಚ್ಚಿನದನ್ನು ಹೇಳಲು ಬಯಸುವುದಿಲ್ಲ ಎಂದು ಗೋಡ್ಸೆ ಕುರಿತಾಗಿನ ಹೇಳಿಕೆಗೆ ಪ್ರಜ್ಞಾ ಠಾಕೂರ್ ಪ್ರತಿಕ್ರಿಯಿಸಿದರು.
2019 ಮೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗೋಡ್ಸೆರನ್ನು ದೇಶಭಕ್ತ ಎಂದು ಕರೆಯುವ ಮೂಲಕ ವಿವಾದಕ್ಕೀಡಾಗಿದ್ದ ಪ್ರಜ್ಞಾ ಸಿಂಗ್ ಠಾಕೂರ್, ಬಳಿಕ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚನೆ ನಡೆಸಿದ್ದರು. 2019 ನವೆಂಬರ್ನಲ್ಲಿ ಸಂಸತ್ತಿನಲ್ಲಿ ಗೋಡ್ಸೆ ಕುರಿತಾಗಿನ ವಿವಾದಾತ್ಮಕ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದರು.
ಕಳೆದ ಭಾನುವಾರ, ಗ್ವಾಲಿಯರ್ನಲ್ಲಿ ಗೋಡ್ಸೆ ಅಧ್ಯಯನ ಕೇಂದ್ರವನ್ನು ತೆರೆದಿದ್ದ ಹಿಂದೂ ಮಹಾಸಭಾ, ಬಳಿಕ ಜಿಲ್ಲಾಡಳಿತದ ಮಧ್ಯಪ್ರವೇಶದಿಂದಾಗಿ ಎರಡು ದಿನಗಳಲ್ಲಿ ಮುಚ್ಚುಗಡೆಗೊಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.