ADVERTISEMENT

ಕಾಂಗ್ರೆಸ್‌ ಮಾಧ್ಯಮ ಸಂಚಾಲಕ ಸೇಠ್ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 17:49 IST
Last Updated 11 ಜುಲೈ 2019, 17:49 IST

ನವದೆಹಲಿ: ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಮಾಧ್ಯಮ ಸಂಚಾಲಕ ರಚೀತ್‌ ಸೇಠ್‌ ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ರಾಹುಲ್‌ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ’ ಎಂದು ರಚೀತ್‌ ಟ್ವೀಟ್‌ ಮಾಡಿದ್ದಾರೆ.

‘ಅವಕಾಶವಾದಿ ಮತ್ತು ಅಧಿಕಾರದ ದಲ್ಲಾಳಿಗಳು ಇರುವಾಗ ರಾಜಕೀಯ ಅರಾಜಕತೆ ಸೃಷ್ಟಿಯಾಗುತ್ತದೆ. ಕರ್ನಾಟಕ ಮತ್ತು ಗೋವಾದಲ್ಲಿನ ಬೆಳವಣಿಗೆಗಳು ಇದಕ್ಕೆ ಸಾಕ್ಷಿಯಾಗಿವೆ. ಆದರೆ, ಬಿಜೆಪಿಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ. ನಮ್ಮಲ್ಲೇ ತಪ್ಪುಗಳಿವೆ. ಈ ಅಭಿಪ್ರಾಯ ವೈಯಕ್ತಿಕವಾದದ್ದು’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಪ್ರಗತಿಪರ ಮತ್ತು ಉದಾರವಾದಿ ಭಾರತಕ್ಕೆ ನನ್ನ ಜೀವನ ಮತ್ತು ರಕ್ತ ಮೀಸಲಾಗಿದೆ. ಇಂದಿರಾಗಾಂಧಿ ನನಗೆ ಸದಾ ಸ್ಫೂರ್ತಿ’ ಎಂದು ಹೇಳಿದ್ದಾರೆ.

‘45 ದಿನಗಳಾಗಿವೆ. ಮಾಧ್ಯಮಗಳ ಊಹಾಪೋಹಗಳನ್ನು ಹೊರತುಪಡಿಸಿದರೆ ನೂತನ ಅಧ್ಯಕ್ಷರನ್ನು ನೇಮಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.