
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಸಹ ಚುನಾವಣಾ ಆಯುಕ್ತರನ್ನು (ಇಸಿ) ಆಯ್ಕೆ ಮಾಡುವ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಸದಸ್ಯರಾಗಿರುತ್ತಾರೆಯೇ ಎನ್ನುವುದರ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವೆ ಬಿರುಸಿನ ಚರ್ಚೆ ನಡೆಯಿತು.
ಚುನಾವಣಾ ಸುಧಾರಣೆ ಬಗ್ಗೆ ನಡೆದ ಚರ್ಚೆಯಲ್ಲಿ ಮಾತನಾಡಿದ ಕಾಂಗ್ರೆಸ್ನ ಕೆ.ಸಿ. ವೇಣುಗೋಪಾಲ್, ಸಿಇಸಿ ಮತ್ತು ಇಸಿ ಅವರನ್ನು ಆಯ್ಕೆ ಮಾಡುವ ‘ಚುನಾವಣಾ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟಿರುವುದೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಇದಕ್ಕೆ ಕಾನೂನು ಸಚಿವರು ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ’ಅಣ್ವಸ್ತ್ರ’ ಪ್ರಯೋಗಿಸುವ ವಿಷಯ ಬಂದಾಗ ಪ್ರಧಾನಿ ನೇತೃತ್ವದ ಚುನಾಯಿತ ಸರ್ಕಾರದ ಮೇಲೆ ನಂಬಿಕೆ ಇರಿಸಬಹುದಾದರೆ, ಉತ್ತಮ ಸಿಇಸಿ ಮತ್ತು ಇಸಿ ಆಯ್ಕೆ ವಿಷಯದಲ್ಲಿ ಈ ನಂಬಿಕೆ ಯಾಕಿಲ್ಲ’ ಎಂದು ಪ್ರಶ್ನಿಸಿದರು.
ಸಿಜೆಐ ಅವರನ್ನು ಹೊರಗಿಟ್ಟ ಆಯ್ಕೆ ಸಮಿತಿಯನ್ನು ಶಾಸಕಾಂಗವು ವಿವೇಚನೆಯಿಂದ ಅಂಗೀಕರಿಸಿರುವಾಗ, ಈ ವಿಷಯದಲ್ಲಿ ನ್ಯಾಯಾಂಗವನ್ನು ಎಳೆದು ತರುವುದು ಯಾಕೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು.
ಈಗಾಗಲೇ ಸುಪ್ರೀಂಕೋರ್ಟ್ ಪ್ರಸ್ತಾಪಿಸಿರುವ ಆಯ್ಕೆ ಸಮಿತಿಯು ಕೇವಲ ಮಧ್ಯಂತರ ವ್ಯವಸ್ಥೆ ಎನ್ನುವುದನ್ನು ವೇಣುಗೋಪಾಲ್ ಸಹ ಒಪ್ಪಿಕೊಂಡಿದ್ದಾರೆ ಎಂದು ರವಿಶಂಕರ್ ಪ್ರಸಾದ್ ಗಮನ ಸೆಳೆದರು.
ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಕಾನೂನು ಚೌಕಟ್ಟು ರೂಪುಗೊಳ್ಳುವವರೆಗೆ, ಪ್ರಧಾನಿ, ಸಿಜೆಐ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಆಯ್ಕೆ ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ಕೆ.ಎಂ.ಜೋಸೆಫ್ (ಈಗ ನಿವೃತ್ತ) ನೇತೃತ್ವದ ಪೀಠವು ಮಾರ್ಗದರ್ಶನ ನೀಡಿತ್ತು.
ಆದರೆ, ಸಿಇಸಿ ನೇಮಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಸೂದೆ ಮಂಡಿಸಿದಾಗ, ಅದರಲ್ಲಿ ಆಯ್ಕೆ ಸಮಿತಿಯಲ್ಲಿ ಪ್ರಧಾನಿ ಮತ್ತು ಪ್ರಧಾನಿ ಸೂಚಿಸಿದ ಕೇಂದ್ರ ಸಚಿವ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಸದಸ್ಯರಾಗಿರುತ್ತಾರೆ ಎಂದು ಹೇಳಿತ್ತು. ಈ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.