ADVERTISEMENT

ಭರವಸೆ ಮರೆತ ಸರ್ಕಾರದಿಂದ ಹೊಸದೇನೂ ಇಲ್ಲದ ಬಜೆಟ್‌: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 12:48 IST
Last Updated 5 ಜುಲೈ 2019, 12:48 IST
ರಣದೀಪ್‌ ಸಿಂಗ್‌ ಸುರ್ಜೆವಾಲ, ಕಾಂಗ್ರೆಸ್‌ ವಕ್ತಾರ
ರಣದೀಪ್‌ ಸಿಂಗ್‌ ಸುರ್ಜೆವಾಲ, ಕಾಂಗ್ರೆಸ್‌ ವಕ್ತಾರ    

ನವದೆಹಲಿ: ಜನರಿಗೆ ನೀಡಿದ ಭರವಸೆಗಳಿಂದ ಹಿಂದೆ ಸರಿದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶಕ್ಕೆ ಹೊಸದೇನನ್ನೂ ನೀಡಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಸಂಸತ್‌ ಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌಧರಿ, ‘ಹೊಸ ಬಾಟಲಿಯ ಹಳೇ ಮದ್ಯವಿದು. ಜನರಿಗೆ ಈ ಹಿಂದೆ ನೀಡಲಾಗಿದ್ದ ಎಲ್ಲ ಭರವಸೆಗಳಿಂದಲೂ ಬಿಜೆಪಿ ಹಿಂದೆ ಸರಿದಿದೆ. ಇದರಿಂದ ಜನರ ದುಃಖ ದುಮ್ಮಾನಗಳು ಹೆಚ್ಚಾಗಿವೆಯಷ್ಟೆ. ಈ ಬಜೆಟ್‌ನಲ್ಲಿ ಹೊಸದೆನಿಸುವುದು ಏನೂ ಇಲ್ಲ,’ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೆವಾಲ ಅವರೂ ಬಜೆಟ್‌ ವಿರುದ್ಧ ಕಿಡಿಕಾರಿದ್ದಾರೆ. ‘ಇದು ಅತ್ಯಂತ ನೀರಸ, ಅಪ್ರಸ್ತುತ, ದಿಕ್ಕು ದಿಸೆಯಿಲ್ಲದ ಬಜೆಟ್‌. ಆರ್ಥಿಕ ಪುನಶ್ಚೇತನಕ್ಕೆ ಇಲ್ಲಿ ಕ್ರಮಗಳೇ ಇಲ್ಲ. ಕನಿಷ್ಠ ಬೆಂಬಲ ಬೆಲೆ ನೀಡುವ ಮಾತೇ ಇಲ್ಲ. ಬರ ಪರಿಹಾರಕ್ಕೆ ಕ್ರಮಗಳಿಲ್ಲ. ಗ್ರಾಮೀಣ ಆರ್ಥಿಕ ಸುಧಾರಣೆ ಇಲ್ಲ. ಅದರ ಬದಲಿಗೆ ಡೀಸೆಲ್‌ ಬೆಲೆ ಏರಿಸಲಾಗಿದೆ. ಉದ್ಯೋಗ, ಗ್ರಾಮೀಣಾಭಿವೃದ್ಧಿಗೆ ಏನನ್ನೂ ನೀಡಲಾಗಿಲ್ಲ,’ ಎಂದು ಅವರು ಕಿಡಿಕಾರಿದ್ದಾರೆ.

ADVERTISEMENT

ಇನ್ನು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಧಿಸಲಾಗುತ್ತಿರುವ ಸೆಸ್‌ಗೆ ಕಾಂಗ್ರೆಸ್‌ ನಾಯಕ ಜೋತಿರಾದಿತ್ಯ ಸಿಂಧಿಯಾ ಕಿಡಿ ಕಾರಿದ್ದಾರೆ.

ಕೇಂದ್ರದ ಬಜೆಟ್‌ ಅನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್‌ ಮೂಲಕ ಕುಟುಕಿದ್ದಾರೆ. ಕೇಂದ್ರ ಸರ್ಕಾರದ ಆಯವ್ಯಯ ಪತ್ರ ರೈತರು, ಯುವಜನರು ಮತ್ತು ಗ್ರಾಮೀಣ ಭಾರತಕ್ಕೆ ಮಾರಕವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.