ADVERTISEMENT

ದೇಶದ ಆರ್ಥಿಕತೆಗೆ ಬೂಸ್ಟರ್‌ ಡೋಸ್ ಬೇಕು: ಕಾಂಗ್ರೆಸ್‌

ಪಿಟಿಐ
Published 18 ಜುಲೈ 2025, 13:52 IST
Last Updated 18 ಜುಲೈ 2025, 13:52 IST
ಜೈರಾಮ್ ರಮೇಶ್‌
ಜೈರಾಮ್ ರಮೇಶ್‌   

ನವದೆಹಲಿ: ದೇಶದ ಆರ್ಥಿಕತೆಗೆ ‘ದೊಡ್ಡ ಬೂಸ್ಟರ್‌ ಡೋಸ್‌’ನ ಅಗತ್ಯವಿದೆ. ಅದು ಜಿಎಸ್‌ಟಿಯ ( ಸರಕು ಮತ್ತು ಸೇವಾ ತೆರಿಗೆ) ಅಮೂಲಾಗ್ರ ಸುಧಾರಣೆ, ತೆರಿಗೆ ಭಯೋತ್ಪಾದನೆ ಮುಕ್ತ ವಾತಾವರಣ ಸೃಷ್ಟಿ ಮತ್ತು ಒಂದೆರಡು ವ್ಯಕ್ತಿಗಳ ಉದ್ಯಮ ಸಮೂಹದ ಪರವಾಗಿ ನಿಂತು ಬೆಳವಣಿಗೆಯನ್ನು ನಿಗದಿಪಡಿಸುವುದನ್ನು ಸ್ಥಗಿತಗೊಳಿಸಿದಾಗ ಮಾತ್ರ ಸಾಧ್ಯ ಎಂದು ಕಾಂಗ್ರೆಸ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ನುವಾಮ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್‌ ಸಂಸ್ಥೆ ಬುಧವಾರ ಬಿಡುಗಡೆ ಮಾಡಿದ್ದ ಸಂಶೋಧನಾ ವರದಿ ಉಲ್ಲೇಖಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಮಾಧ್ಯಮ ವಿಭಾಗ) ಜೈರಾಮ್‌ ರಮೇಶ್‌ ಈ ಆತಂಕ ವ್ಯಕ್ತಪಡಿಸಿದ್ದು, ‘ಭಾರತದ ಇಂದಿನ ಆರ್ಥಿಕ ಸ್ಥಿತಿಯ ಒಂದಷ್ಟು ಕಳವಳಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದಿದ್ದಾರೆ.

‘ಸಾಲ ಮತ್ತು ರಫ್ತು, ಜಿಎಸ್‌ಟಿ ಸಂಗ್ರಹದಂತಹ ಹಲವು ಪ್ರಮುಖ ಆವರ್ತನ ಸೂಚಕಗಳು ನಿಧಾನಗತಿಗೆ ತಲುಪಿವೆ ಅಥವಾ ಸ್ಥಗಿತಗೊಂಡಿವೆ. ರಿಯಲ್‌ ಎಸ್ಟೇಟ್, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ (ಕಾರು ಇತ್ಯಾದಿ) ಮಾರಾಟ ಸೇರಿದಂತೆ ಖಾಸಗಿ ಬಳಕೆ ಪ್ರಮಾಣವೂ ನಿರೀಕ್ಷಿತ ವೇಗವನ್ನು ಪಡೆದುಕೊಳ್ಳುತ್ತಿಲ್ಲ ಎಂಬುದನ್ನು ವರದಿ ಪ್ರಮುಖವಾಗಿ ಹೊರಹಾಕಿದೆ’ ಎಂದು ‘ಎಕ್ಸ್‌’ನಲ್ಲಿ ಜೈರಾಮ್ ರಮೇಶ್‌ ಹೇಳಿದ್ದಾರೆ.

ADVERTISEMENT

‘2025–26ರಲ್ಲಿ ಕೈಗಾರಿಕಾ ಕ್ಷೇತ್ರ ಮಂದಗತಿಯಲ್ಲಿದೆ. ವಿದ್ಯುತ್‌ ಮತ್ತು ಡೀಸೆಲ್‌ ಬಳಕೆಯಲ್ಲೂ ಇದೇ ಸ್ಥಿತಿ ಇದೆ. ಎಂಟು ಕೋಟಿ ಕೈಗಾರಿಕೆಗಳು ಕಳಪೆ ಪ್ರಗತಿಯನ್ನು ತೋರಿಸುತ್ತಿವೆ’

‘ಕೃಷಿ ಬೆಳೆಗಳ ಬೆಲೆ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಇದು ದೊಡ್ಡ ಹೊಡೆತ. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಹಣದ ಹರಿವಿಲ್ಲ. ವೇತನ ಮತ್ತು ಬಂಡವಾಳ ವೆಚ್ಚವನ್ನು ಕಡಿತ ಮಾಡುತ್ತಿವೆ. ಇದೆಲ್ಲವೂ ದೇಶದ ಆರ್ಥಿಕತೆಗೆ ಬೂಸ್ಟರ್‌ ಡೋಸ್‌ ಬೇಕು ಎನ್ನುವುದನ್ನು ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಬೆಲೆ ಏರಿಕೆ, ಖಾಸಗಿ ಬಂಡವಾಳ ಹೂಡಿಕೆ ಕುಸಿತ, ವೇತನದ ನಿಶ್ಚಲತೆಯು ಸಾಮಾನ್ಯ ನಾಗರಿಕನನ್ನು ಕಾಡುತ್ತಿದೆ. ಇದಕ್ಕೆ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯೇ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆರೋಪಿಸುತ್ತಲೇ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.