ಭೋಪಾಲ್: ನಾನು ಕಾಂಗ್ರೆಸ್ ಪರ ಪ್ರಚಾರ ಮಾಡಲ್ಲ. ಭಾಷಣಕ್ಕೆ ಹೋಗಲ್ಲ. ಹಾಗೇನಾದರೂ ಹೋದರೆ ಕಾಂಗ್ರೆಸ್ಗೆ ದೊರೆಯುವ ಮತಗಳು ಕಡಿಮೆಯಾಗಲಿವೆ....
ಹೀಗೆಂದು ಹೇಳಿದ್ದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್. ಶಾಸಕ ಜಿತು ಪತ್ವಾರಿ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರ ಎದುರು ಅ.13ರಂದು ಆಡಿದ್ದ ಮಾತಿನ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ವಿಧಾನಸಭಾಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡು ದಿನಗಳ ಕಾಲ ಮಧ್ಯಪ್ರದೇಶ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಸಿಂಗ್ ಯಾವುದೇ ಜಾಥಾ ಹಾಗೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ.
ನನ್ನ ಕೆಲಸ ಒಂದೇ. ನಾನು ಪ್ರಚಾರ ಕೈಗೊಳ್ಳಲ್ಲ. ಭಾಷಣ ಮಾಡಲ್ಲ. ನಾನು ಭಾಷಣ ಮಾಡಿದರೆ ಕಾಂಗ್ರೆಸ್ಗೆ ಮತಗಳ ಸಂಖ್ಯೆ ಇಳಿಕೆಯಾಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಸಂಪೂರ್ಣ ಶ್ರಮವಹಿಸಿ ಪಕ್ಷದ ಪರ ಪ್ರಚಾರ ಮಾಡಿದರೆ ಮಾತ್ರ ಗೆಲುವು ನಮ್ಮದಾಗಲಿವೆ ಎಂದು ಸಲಹೆ ನೀಡಿದರು.
ಪಕ್ಷಕ್ಕಾಗಿ ಕೆಲಸ ಮಾಡದಿದ್ದಲ್ಲಿ ನಮ್ಮ ಕನಸು ಈಡೇರುವುದಿಲ್ಲ. ನೀವು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಸರ್ಕಾರ ರಚನೆ ಕಷ್ಟಸಾಧ್ಯ. ಪ್ರತಿಪಕ್ಷಕ್ಕೆ ಟಿಕೆಟ್ ದೊರೆತರೆ ಅವರು ಜಯಗಳಿಸಲಿದ್ದಾರೆಎಂದು ಹೇಳಿದ್ದಾರೆ.
ಬಿಜೆಪಿ ಟೀಕೆ
ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಪಕ್ಷದ ಹಿರಿಯ ಮುಖಂಡನನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ಗೆ ನೀಡಿದ ನೋವನ್ನು ನಾವು ನಮ್ಮ ಪಕ್ಷದವರಿಗೆ ನೀಡುತ್ತಿರಲಿಲ್ಲ. ಇದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಹಿರಿಯಮುಖಂಡನಿಗೆ ಪ್ರಾಮುಖ್ಯತೆ ನೀಡದೆ ಇರುವುದು ಸರಿಯಲ್ಲ.ಒಬ್ಬ ಹಿರಿಯ ಮುಖಂಡನನ್ನು ಈ ರೀತಿ ಹೀನಾಯವಾಗಿ ನಡೆಸಿಕೊಳ್ಳುತ್ತದೆಂದು ಊಹಿಸಿರಲಿಲ್ಲ. ಕೊನೆಯದಾಗಿ ಮುಖಂಡರಿಗೆ ಗೌರವ ನೀಡುವುದನ್ನಾದರೂ ಕಾಂಗ್ರೆಸ್ ಕಲಿಯಬೇಕು ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.