ADVERTISEMENT

ಶಾ ಹೆಸರಿನ ನಕಲಿ ಪತ್ರ ಶೇರ್ ಮಾಡಿ ಪೇಚಿಗೆ ಸಿಲುಕಿದ ಕಾಂಗ್ರೆಸ್ ನಾಯಕಿ ನಗ್ಮಾ!

ನೂಪುರ್ ಶರ್ಮಾಗೆ ಜಡ್ ಪ್ಲಸ್ ಭದ್ರತೆ ನೀಡಿ ಎಂದು ಅಮಿತ್ ಶಾ ಹೇಳಿದ್ರು ಎನ್ನುವ ಪತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2022, 16:05 IST
Last Updated 14 ಜೂನ್ 2022, 16:05 IST
ನಟಿ ಹಾಗೂ ಮಾಜಿ ಸಂಸದೆ ನಗ್ಮಾ– ಚಿತ್ರ ಕೃಪೆ ಇನ್‌ಸ್ಟಾಗ್ರಾಂ
ನಟಿ ಹಾಗೂ ಮಾಜಿ ಸಂಸದೆ ನಗ್ಮಾ– ಚಿತ್ರ ಕೃಪೆ ಇನ್‌ಸ್ಟಾಗ್ರಾಂ   

ಬೆಂಗಳೂರು: ‘ಪ್ರವಾದಿ ಮಹಮ್ಮದ್‌ರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನೂಪುರ್ ಶರ್ಮಾ ಅವರಿಗೆ ಜಡ್‌ ಪ್ಲಸ್ ಭದ್ರತೆ ನೀಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಪತ್ರ ಬರೆದಿದ್ದಾರೆ’ ಎಂದು ಟ್ವೀಟ್ ಮಾಡಿ, ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕಿ ಹಾಗೂ ನಟಿ ನಗ್ಮಾ ಇದೀಗ ಪೇಚಿಗೆ ಸಿಲುಕಿದ್ದಾರೆ.

ನಗ್ಮಾ ಹಾಕಿದ್ದ ಪತ್ರ ನಕಲಿ ಎನ್ನಲಾಗಿದ್ದು ಅನೇಕ ಬಿಜೆಪಿ ಕಾರ್ಯಕರ್ತರು, ನಾಯಕರು ನಗ್ಮಾ ಮೇಲೆ ಕೆಂಗಣ್ಣು ಬೀರಿದ್ದಾರೆ. ನಗ್ಮಾ ಅವರ ಈ ಟ್ವೀಟ್ ವಿವಾದ ಸೃಷ್ಟಿಸಿದ ನಂತರ ಅದನ್ನುಅವರು ಅಳಿಸಿ ಹಾಕಿದ್ದರು.

ಗೃಹ ಸಚಿವ ಅಮಿತ್ ಶಾ ಹೆಸರಿನಲ್ಲಿ ಜೂನ್ 13 ರಂದು ಉತ್ತರಾಖಂಡ ಸಿಎಂಗೆ ಈ ಪತ್ರ ಬರೆಯಲಾಗಿದೆ. ಅದರಲ್ಲಿ, ‘ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಪ್ರಚಾರ ಮಾಡುವಲ್ಲಿ ನೂಪುರ್ ಶರ್ಮಾ ಹಾಗೂ ಅಜಯ್ ಗುಪ್ತಾ ಅವರು ಶ್ರಮಿಸುತ್ತಿದ್ದು, ಅಂತಹವರಿಗೆ ಈಗ ಪ್ರಾಣ ಬೆದರಿಕೆ ಉಂಟಾಗಿದೆ. ಇದನ್ನು ಆದ್ಯತೆ ಎಂದು ಪರಿಗಣಿಸಿ ಅವರಿಗೆ ಕೂಡಲೇ ಉನ್ನತ ಭದ್ರತೆ ನೀಡಿ’ ಎಂದು ಹೇಳಲಾಗಿತ್ತು. ಅಲ್ಲದೇ ಅಮಿತ್ ಶಾ ಅವರ ನಕಲಿ ಸಹಿಯನ್ನು ಕೂಡ ಅದರಲ್ಲಿ ಮಾಡಲಾಗಿತ್ತು.

ADVERTISEMENT

ಇದೇ ಪತ್ರವನ್ನು ನಗ್ಮಾ ಟ್ವಿಟರ್‌ನಲ್ಲಿ ಹಂಚಿಕೊಂಡು ‘ನೋಡಿ ಇವರಿಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಅವಳು (ನೂಪುರ್ ಶರ್ಮಾ) ಪ್ರವಾದಿ ಮಹಮ್ಮದ್‌ರ ಬಗ್ಗೆ ತುಚ್ಛ ಹೇಳಿಕೆ ನೀಡಿ ಸಹೋದರರಂತೆ ಇರುವ ಹಿಂದೂ ಮುಸ್ಲಿಂರ ಮಧ್ಯೆ ಹುಳಿ ಹಿಂಡುತ್ತಿದ್ದರೆ ಇವರಿಗೆ (ಗೃಹ ಸಚಿವ) ಆಕೆ ಮಾದರಿ’ ಎಂದು ಟ್ವೀಟ್ ಮಾಡಿದ್ದರು.

‘ಕೆಲ ಗಂಟೆಗಳ ನಂತರ ಇದೊಂದು ನಕಲಿ ಪತ್ರ, ಗೃಹ ಸಚಿವ ಅಮಿತ್ ಶಾ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲು ಈ ರೀತಿ ಕುತಂತ್ರ ಮಾಡಿದ್ದಾರೆ. ಇದನ್ನು ಹಿಂದೆ ಮುಂದೆ ವಿಚಾರ ಮಾಡದೇ ಟ್ವೀಟ್ ಮಾಡಿದ್ದರಲ್ಲಾ? ನಾಚಿಕೆ ಆಗುವುದಿಲ್ಲವಾ?’ ಎಂದು ಅನೇಕ ಬಿಜೆಪಿ ಕಾರ್ಯಕರ್ತರು ನಗ್ಮಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ತಮ್ಮ ತಪ್ಪಿನ ಅರಿವಾಗಿ ನಗ್ಮಾ ಅವರು ಟ್ವೀಟ್‌ ಅನ್ನು ಅಳಿಸಿ ಹಾಕಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಗ್ಮಾ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.