ನವದೆಹಲಿ: ಜಿಡಿಪಿ ಮತ್ತು ನಿರುದ್ಯೋಗದ ವ್ಯತಿರಿಕ್ತ ಅಂಕಿ ಅಂಶಗಳು ಹಾಗೂ ಶಿಲೀಂಧ್ರಕ್ಕೆ ಚಿಕಿತ್ಸೆ ನೀಡುವ ಔಷಧಿಗಳ ಕೊರತೆಯನ್ನು ಎತ್ತಿಹಿಡಿದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಕನಿಷ್ಠ ಜಿಡಿಪಿ, ಗರಿಷ್ಠ ನಿರುದ್ಯೋಗ- ಪ್ರಧಾನ ಮಂತ್ರಿಗಳ ಅವಮಾನಕರ ಅಂಶವಾಗಿದೆ' ಎಂದು ಅವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಇದರೊಂದಿಗೆ 2014 ರಿಂದ ಯುವಕರಲ್ಲಿ ನಿರುದ್ಯೋಗ ಹೆಚ್ಚಳವನ್ನು ತೋರಿಸುವ ಗ್ರಾಫ್ ಅನ್ನು ಹಂಚಿಕೊಂಡಿದ್ದಾರೆ.
ದೇಶದ ಅರ್ಥ ವ್ಯವಸ್ಥೆಯು 2020–21ರಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಅರ್ಥ ವ್ಯವಸ್ಥೆಯು ಒಟ್ಟು ಶೇಕಡ (–)7.3ರಷ್ಟು ಕುಸಿದಿದೆ. ಕುಸಿತದ ಪ್ರಮಾಣವು ಶೇ (–) 8ರಷ್ಟು ಇರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಈ ಹಿಂದೆ ಅಂದಾಜಿಸಿತ್ತು. ಈ ಬೆನ್ನಲ್ಲೇ ರಾಹುಲ್ ಹೇಳಿಕೆ ನೀಡಿದ್ದಾರೆ.
ಮ್ಯೂಕರ್ ಮೈಕೊಸಿಸ್ ಅಥವಾ ಶಿಲೀಂಧ್ರದ ಚಿಕಿತ್ಸೆ ಕುರಿತು ಪ್ರಶ್ನೆಗಳನ್ನು ಕೇಳಿರುವ ರಾಹುಲ್, ಆ್ಯಂಫೊಟೆರಿಸಿನ್–ಬಿ ಕೊರತೆಯ ಬಗ್ಗೆ ಏನು ಮಾಡಲಾಗುತ್ತಿದೆ? ರೋಗಿಗಳು ಈ ಔಷಧಿಯನ್ನು ಪಡೆಯಲು ಮಾಡುತ್ತಿರುವ ಸಹಾಯದ ವಿಧಾನವೇನು'. ಚಿಕಿತ್ಸೆ ನೀಡುವ ಬದಲು, ಮೋದಿ ಸರ್ಕಾರ ಔಪಚಾರಿಕತೆಗಳಲ್ಲಿ ಸಾರ್ವಜನಿಕರನ್ನು ಏಕೆ ತೊಡಗಿಸಿಕೊಂಡಿದೆ' ಎಂದವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಜಿಡಿಪಿ: ಶೇಕಡ (–)7.3ರಷ್ಟು ಕುಸಿತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.