ನವದೆಹಲಿ: ಪಕ್ಷದ ನಾಯಕತ್ವವನ್ನು ಟೀಕಿಸಿ ಹೇಳಿಕೆ ನೀಡಿರುವ ಕಪಿಲ್ ಸಿಬಲ್ ವಿರುದ್ಧ ಕಾಂಗ್ರೆಸ್ನ ಮುಖಂಡರು ಹರಿಹಾಯ್ದಿದ್ದಾರೆ. ಸಿಬಲ್ ಅವರು ಬಿಜೆಪಿ ಮತ್ತು ಆರ್ಎಸ್ಎಸ್ನವರ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಮಣಿಕಮ್ ಟ್ಯಾಗೋರ್ ಆರೋಪಿಸಿದ್ದಾರೆ.
ಕಾಂಗ್ರೆಸ್ನ ನಾಯಕತ್ವದ ಸ್ಥಾನದಲ್ಲಿ ಗಾಂಧಿ ಕುಟುಂಬದವರು ಇರಬಾರದು ಎಂಬುದು ಆರ್ಎಸ್ಎಸ್ ಮತ್ತು ಬಿಜೆಪಿಯ ಬಯಕೆಯಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಭಾರತ ಎಂಬ ಪರಿಕಲ್ಪನೆಯನ್ನು ನಾಶ ಮಾಡಲು ಅದು ಅಗತ್ಯವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಷ್ಠರಾಗಿರುವ ಟ್ಯಾಗೋರ್ ಹೇಳಿದ್ದಾರೆ.
‘ನೆಹರೂ–ಗಾಂಧಿ ಕುಟುಂಬದವರು ನಾಯಕತ್ವದಲ್ಲಿ ಇರಬಾರದು ಎಂದು ಆರ್ಎಸ್ಎಸ್ ಮತ್ತು ಬಿಜೆಪಿ ಬಯಸಲು ಕಾರಣವೇನು? ಗಾಂಧಿ ಕುಟುಂಬದ ನಾಯಕತ್ವ ಇಲ್ಲದೇ ಇದ್ದರೆ ಕಾಂಗ್ರೆಸ್ ಪಕ್ಷವು ಜನತಾ ಪಕ್ಷದಂತಾಗುತ್ತದೆ. ಆಗ ಕಾಂಗ್ರೆಸ್ ಪಕ್ಷವನ್ನು ಮತ್ತು ಭಾರತದ ಪರಿಕಲ್ಪನೆಯನ್ನು ನಾಶ ಮಾಡುವುದು ಸುಲಭ’ ಎಂದು ಟ್ಯಾಗೋರ್ ಟ್ವೀಟ್ ಮಾಡಿದ್ದಾರೆ.
*
ಈಗಿನ ನಾಯಕತ್ವದ ಬಗ್ಗೆ ಪ್ರತಿದಿನವೂ ಗೊಣಗಾಡುತ್ತ ಇರುವ ಬದಲು ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಮುಕ್ತ ಅವಕಾಶ ಇದೆ
-ಪವನ್ ಖೇರ, ಕಾಂಗ್ರೆಸ್ ವಕ್ತಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.