
ಮುಂಬೈ: ಕಾಂಗ್ರೆಸ್ ಶಾಸಕ ಸಾಜಿದ್ ಖಾನ್ ಪಠಾಣ್ ಅವರಿಗೆ ಬಿಷ್ಣೋಯಿ ಗ್ಯಾಂಗ್ನ ಸಹಚರರು ಜೀವ ಬೆದರಿಕೆ ಒಡ್ಡಿದ್ದಾರೆ. ಅಲ್ಲದೇ ₹10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ವಿಜಯ್ ವಡೆಟ್ಟೀವಾರ್ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.
ಈ ಪ್ರಕರಣದಲ್ಲಿ ತುರ್ತಾಗಿ ಕ್ರಮವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವುದರ ಜತೆಗೆ ಖಾನ್ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಸೂಚಿಸಬೇಕು ಎಂದು ಸಭಾಪತಿಗಳಿಗೆ ವಿಜಯ್ ಮನವಿ ಮಾಡಿದ್ದಾರೆ.
ಅಕೋಲ ಪಶ್ಚಿಮ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ಆಗಿರುವ ಪಠಾಣ್ ಅವರಿಗೆ ಫೆಬ್ರುವರಿ 17ರಂದು ಮಧ್ಯಾಹ್ನ 3.30ರ ಸುಮಾರಿಗೆ ಅಂತರರಾಷ್ಟ್ರೀಯ ಕರೆಯೊಂದು ಬಂದಿತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಶುಭಂ ಲೋಂಕರ್ ಎಂದು ಪರಿಚಯಿಸಿಕೊಂಡಿದ್ದಲ್ಲದೇ, ತಾನು ಬಿಷ್ಣೋಯಿ ಗ್ಯಾಂಗ್ನ ಸಹಚರ ಎಂದು ಹೇಳಿಕೊಂಡಿದ್ದಾನೆ. ₹10 ಕೋಟಿ ನೀಡದಿದ್ದರೆ ಸಾಜಿದ್ ಖಾನ್ ಅವರನ್ನು ಹತ್ಯೆಗೈಯುವುದಾಗಿಯೂ ಬೆದರಿಸಿದ್ದಾನೆ ಎಂದು ವಿಜಯ್ ಮಾಹಿತಿ ನೀಡಿದ್ದಾರೆ.
ಜತೆಗೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಅವರು ನೀಡುವ ರಕ್ಷಣೆ ತಾತ್ಕಾಲಿಕ ಮಾತ್ರ. ನಂತರದಲ್ಲಿ ಸಾಜಿದ್ ಅವರನ್ನು ತನ್ನ ಗ್ಯಾಂಗ್ ಹತ್ಯೆಗೈಯಲಿದೆ ಎಂದೂ ಕರೆ ಮಾಡಿದ ವ್ಯಕ್ತಿ ಬೆದರಿಕೆ ಒಡ್ಡಿದ್ದಾನೆ. ಚುನಾಯಿತ ಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾದರೆ ಸಾಮಾನ್ಯ ಜನರ ಸ್ಥಿತಿ ಏನು ಇದು ಅತ್ಯಂತ ಗಂಭೀರ ಪ್ರಕರಣ ಎಂದೂ ವಿಜಯ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.