ADVERTISEMENT

ಮತ ಪಡೆಯಲಷ್ಟೇ ಕಾಂಗ್ರೆಸ್ ಆದಿವಾಸಿಗಳ ಅಭಿವೃದ್ಧಿ ಬಗ್ಗೆ ಮಾತನಾಡುತ್ತೆ: ಅಮಿತ್ ಶಾ

ಪಿಟಿಐ
Published 18 ಸೆಪ್ಟೆಂಬರ್ 2021, 14:59 IST
Last Updated 18 ಸೆಪ್ಟೆಂಬರ್ 2021, 14:59 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಜಬಲಾಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಆದಿವಾಸಿಗಳ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್ ಮಾತನಾಡುವುದು ಕೇವಲ ಅವರ ಮತಗಳನ್ನು ಪಡೆಯಲಷ್ಟೇ ಎಂದು ಆರೋಪಿಸಿದ ಅವರು, ಬಿಜೆಪಿ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಹೇಳಿದರು.

ಅವರು ಇಲ್ಲಿನ ಗಾರಿಸನ್ ಮೈದಾನದಲ್ಲಿ ಬುಡಕಟ್ಟು ಪ್ರತಿಮೆಗಳು ಮತ್ತು ಹಿಂದಿನ ಗೊಂಡ್ವಾನ ಸಾಮ್ರಾಜ್ಯದ ರಾಜ ಶಂಕರ್ ಶಾ ಮತ್ತು ಅವರ ಪುತ್ರ ರಘುನಾಥ ಶಾ ಅವರ ಗೌರವಾರ್ಥವಾಗಿ ಆಯೋಜಿಸಲಾದ 'ಗೌರವ ಉತ್ಸವ'ದಲ್ಲಿ ಮಾತನಾಡುತ್ತಿದ್ದರು.

'ಕಾಂಗ್ರೆಸ್ ಯಾವಾಗಲೂ ಮತಗಳನ್ನು ಪಡೆಯಲು ಬುಡಕಟ್ಟು ಕಲ್ಯಾಣದ ಬಗ್ಗೆ ಮಾತನಾಡುತ್ತಿತ್ತು, ಆದರೆ ಅವರ ಅಭಿವೃದ್ಧಿಗಾಗಿ ಏನನ್ನೂ ಮಾಡಲಿಲ್ಲ. ಬುಡಕಟ್ಟು ಮತಗಳನ್ನು ವಿಭಜಿಸುವುದು ಅವರ ಉದ್ದೇಶವಾಗಿತ್ತು. ಆದರೆ ಜನಾದೇಶ ಸಿಕ್ಕಾಗಲೆಲ್ಲಾ ಬಿಜೆಪಿಯು ಆದಿವಾಸಿಗಳಿಗ ಅಭಿವೃದ್ಧಿಗಾಗಿ ಬದ್ಧವಾಗಿದೆ ಮತ್ತು ಕೆಲಸ ಮಾಡುತ್ತದೆ' ಎಂದು ಅವರು ಹೇಳಿದರು.

ADVERTISEMENT

ಬಿಜೆಪಿ ಆದಿವಾಸಿಗಳಿಗೆ ಅವರ ಪ್ರದೇಶಗಳಲ್ಲಿ ಮನೆ, ವಿದ್ಯುತ್ ಸರಬರಾಜು ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಿದೆ. ಅವರು ಗೌರವಾನ್ವಿತ ಜೀವನ ನಡೆಸಲು ಪಕ್ಷವು ಈಗ ಅವರ ಮನೆಗಳಿಗೆ ನೀರಿನ ಪೂರೈಕೆಗೆ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು, 2013-14ರ ಕೇಂದ್ರ ಬಜೆಟ್ ನಲ್ಲಿ ಆದಿವಾಸಿಗಳಿಗೆ ಕೇವಲ ₹ 4,200 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿತ್ತು. 'ಆದರೆ ಈ ಮೊತ್ತವನ್ನು ಈಗ ₹ 7,900 ಕೋಟಿಗೆ ಹೆಚ್ಚಿಸಲಾಗಿದೆ. ವಿವಿಧ ಸಚಿವಾಲಯಗಳ ಅಡಿಯಲ್ಲಿ ಬುಡಕಟ್ಟು ಅಭಿವೃದ್ಧಿಯ ಘಟಕದ ಬಜೆಟ್ 2021-22ರಲ್ಲಿ ₹ 71,900 ಕೋಟಿಗೆ, 2013-14 ರಲ್ಲಿ ₹ 21,500 ಕೋಟಿಗೆ ಏರಿದೆ' ಎಂದು ಅವರು ಹೇಳಿದರು.

ಕೇಂದ್ರವು ಆರಂಭಿಸಿದ ವಿವಿಧ ಯೋಜನೆಗಳ ಕುರಿತು ಮಾತನಾಡಿದ ಶಾ, ನಿಗದಿತ ಬುಡಕಟ್ಟು ಕಲ್ಯಾಣ ಕಾರ್ಯಗಳ ವ್ಯಾಪ್ತಿಯನ್ನು 41 ಸಚಿವಾಲಯಗಳಿಗೆ ವಿಸ್ತರಿಸಲಾಗಿದೆ. ನರೇಂದ್ರ ಮೋದಿ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ 18 ಬುಡಕಟ್ಟು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದೆ ಮತ್ತು ಎರಡನೇ ಅವಧಿಯಲ್ಲಿ ಆ ಸಂಖ್ಯೆಯನ್ನು 27 ಕ್ಕೆ ಹೆಚ್ಚಿಸಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.