ADVERTISEMENT

ಕಾಂಗ್ರೆಸ್‌ಗೆ ಪ್ರಶಾಂತ್‌ ಕಿಶೋರ್‌ ಕಾರ್ಯತಂತ್ರ

ಮೂವರು ಸದಸ್ಯರ ಸಮಿತಿ ವರದಿ ಆಧರಿಸಿ ಒಂದು ವಾರದೊಳಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 18:36 IST
Last Updated 16 ಏಪ್ರಿಲ್ 2022, 18:36 IST
ರಾಹುಲ್‌ ಗಾಂಧಿ ಮತ್ತು ಪ್ರಶಾಂತ್‌ ಕಿಶೋರ್‌
ರಾಹುಲ್‌ ಗಾಂಧಿ ಮತ್ತು ಪ್ರಶಾಂತ್‌ ಕಿಶೋರ್‌   

ನವದೆಹಲಿ: ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಯಾವ ಕಾರ್ಯತಂತ್ರ ಅನುಸರಿಸಬಹುದು ಎಂಬ ಬಗ್ಗೆ ತಾವು ರೂಪಿಸಿರುವ ಯೋಜನೆಯನ್ನುಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ (ಪಿಕೆ) ಅವರು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಇತರ ಮುಖಂಡರ ಮುಂದೆ ಶನಿವಾರ ಮಂಡಿಸಿದ್ದಾರೆ. ‌

ಸೋನಿಯಾ ಗಾಂಧಿ ಅವರು ರಚಿಸಿರುವ ಮೂವರು ಸದಸ್ಯರ ಸಮಿತಿಯು ಈ ಕಾರ್ಯತಂತ್ರ ಯೋಜನೆಯನ್ನು ಪರಿಶೀಲನೆಗೆ ಒಳಪಡಿಸಲಿದೆ. ವಾರದೊಳಗೆ ಸಮಿತಿಯು ವರದಿ ನೀಡಲಿದೆ. ಅದರ ಆಧಾರದಲ್ಲಿ ಪಕ್ಷವು ನಿರ್ಧಾರ ಕೈಗೊಳ್ಳಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣಗೋಪಾಲ್‌ ತಿಳಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಎ.ಕೆ. ಆ್ಯಂಟನಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್‌, ಅಂಬಿಕಾ ಸೋನಿ, ದಿಗ್ವಿಜಯ್‌ ಸಿಂಗ್‌ ಮತ್ತು ಅಜಯ್‌ ಮಾಕನ್‌ ಅವರು ಸಭೆಯಲ್ಲಿ ಹಾಜರಿದ್ದರು.

ADVERTISEMENT

ಕಾಂಗ್ರೆಸ್‌ ಪಕ್ಷವು ಮುಂದಿನ ತಿಂಗಳು ರಾಜಸ್ಥಾನದಲ್ಲಿ ಚಿಂತನ ಶಿಬಿರವೊಂದನ್ನು ಆಯೋಜಿಸಿದೆ. ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾರ್ಯತಂತ್ರ ಸಭೆಯು ನಡೆದಿದೆ.

2024ರ ಲೋಕಸಭಾ ಚುನಾವಣೆಯನ್ನು ಕೇಂದ್ರೀಕರಿಸಿಕೊಂಡೇ ಕಾರ್ಯತಂತ್ರ ಸಿದ್ಧಪಡಿಸಲಾಗಿದೆ. ಹಾಗಿದ್ದರೂ ಈ ವರ್ಷದಲ್ಲಿ ಬರುವ ವಿಧಾನ ಸಭಾ ಚುನಾವಣೆಯನ್ನೂ ಗಮನದಲ್ಲಿ ಇರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.