ADVERTISEMENT

ಪಕ್ಷದ ತಕ್ಷಣದ ಪುನರುಜ್ಜೀವನಕ್ಕೆ ಯಾವುದೇ ಮಂತ್ರದಂಡ ಇಲ್ಲ: ಸೋನಿಯಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 19:50 IST
Last Updated 9 ಮೇ 2022, 19:50 IST
ದೆಹಲಿಯಲ್ಲಿ ಸೋಮವಾರ ನಡೆದ ಸಿಡಬ್ಲ್ಯುಸಿ ಸಭೆಗೆ ಬಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ –ಪಿಟಿಐ ಚಿತ್ರ
ದೆಹಲಿಯಲ್ಲಿ ಸೋಮವಾರ ನಡೆದ ಸಿಡಬ್ಲ್ಯುಸಿ ಸಭೆಗೆ ಬಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ –ಪಿಟಿಐ ಚಿತ್ರ   

ನವದೆಹಲಿ: ಪಕ್ಷದ ಪುನರ್‌ ಸಂಘಟನೆಗೆ ವೇಗ ನೀಡಲು ಎಲ್ಲರ ಒಗ್ಗಟ್ಟು ಹಾಗೂ ಬದ್ಧತೆ ಅಗತ್ಯವಿದ್ದು, ಈ ಸಂದೇಶವನ್ನು ರವಾನಿಸಲುಉದಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಚಿಂತನ ಶಿಬಿರಕ್ಕೆ ಎಲ್ಲ ಮುಖಂಡರ ಸಹಕಾರ ಬೇಕು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಉನ್ನತ ನಿರ್ಧಾರ ತೆಗೆದುಕೊಳ್ಳುವ ‘ಕಾಂಗ್ರೆಸ್ ಕಾರ್ಯಕಾರಿ ಸಮಿತಿ’ ಸಭೆ (ಸಿಡಬ್ಲ್ಯುಸಿ) ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಪಕ್ಷದ ತಕ್ಷಣದ ಪುನರುಜ್ಜೀವನಕ್ಕೆ ಯಾವುದೇ ಮಂತ್ರದಂಡವಿಲ್ಲ. ನಿಸ್ವಾರ್ಥ ಕೆಲಸ, ಶಿಸ್ತು, ಜಾಗೃತ ಪ್ರಜ್ಞೆಯಿಂದ ಇದು ಸಾಧ್ಯ ಎಂದರು. ‘ಚಿಂತನ ಶಿಬಿರವು ಕೇವಲ ಒಂದು ಆಚರಣೆ ರೀತಿ ಆಗಬಾರದು. ಮುಂದಿರುವ ಸೈದ್ಧಾಂತಿಕ, ಚುನಾವಣಾ ಸವಾಲುಗಳನ್ನು ಎದುರಿಸುವ ದಿಸೆಯಲ್ಲಿ ಶಿಬಿರವು ಪಕ್ಷದ ಪುನರ್‌ ಸಂಘಟನೆಗೆ ಮಾರ್ಗ ಹಾಕಿಕೊಡಬೇಕು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ 13ರಿಂದ 15ರವರೆಗೆ ನಡೆಯಲಿರುವ ಶಿಬಿರದಲ್ಲಿ 400 ಕಾಂಗ್ರೆಸ್ ಸದಸ್ಯರು ಭಾಗಿಯಾಗಲಿದ್ದಾರೆ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯ, ರೈತರು, ಯುವ ಜನಾಂಗ ಹಾಗೂ ಸಂಘಟನಾ ವಿಚಾರಗಳ ಚರ್ಚೆ ನಡೆಯಲಿದೆ. ಕೊನೆಯ ದಿನ ‘ಉದಯಪುರ ನವ ಸಂಕಲ್ಪ’ವನ್ನು ಪಕ್ಷ ಮಾಡಲಿದೆ. ಡಿಜಿಟಲ್ ಸದಸ್ಯತ್ವ ಸೇರ್ಪಡೆ ಮಾಡಲು ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಸೋನಿಯಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.