ADVERTISEMENT

ಕೈ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಮುಂದಾದ ಖರ್ಗೆಗೆ ಜಿ23 ನಾಯಕರಿಂದಲೂ ಬೆಂಬಲ

ಪಿಟಿಐ
Published 30 ಸೆಪ್ಟೆಂಬರ್ 2022, 7:51 IST
Last Updated 30 ಸೆಪ್ಟೆಂಬರ್ 2022, 7:51 IST
   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಮುಂದಾಗಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ಭಿನ್ನಮತೀಯ ಬಣ ‘ಜಿ23’ ನಾಯಕರ ಬೆಂಬಲವೂ ಸಿಗಲಾರಂಭಿಸಿದೆ.

ಪಕ್ಷದ ಸಂಘಟನಾತ್ಮಕ ಬದಲಾವಣೆಗೆ ಆಗ್ರಹಿಸಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ‘ಜಿ23’ ಬಣದ ಸದಸ್ಯರಾದ ಮನೀಶ್ ತಿವಾರಿ ಮತ್ತು ಆನಂದ್ ಶರ್ಮಾ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.

ಸಂಸದ ಶಶಿ ತರೂರ್‌ ಅವರೂ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಅವರೂ ಕೂಡ ಜಿ23 ತಂಡದ ಸದಸ್ಯರು. ಆದರೆ, ಈಗ ಅವರದ್ದೇ ತಂಡದ ಸದಸ್ಯರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ.

ADVERTISEMENT

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ಅವರು ಅಧ್ಯಕ್ಷ ಸ್ಥಾನದ ರೇಸ್‌ನಿಂದ ಹೊರಗುಳಿದ ನಂತರ, ದಿಗ್ವಿಜಯ್‌ ಸಿಂಗ್‌ ಅವರು ತಾವು ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಗುರುವಾರ 10 ಸೆಟ್ ಅರ್ಜಿ ಪಡೆದುಕೊಂಡಿದ್ದರು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ ಎಂದು ಶುಕ್ರವಾರ ದಿಗ್ವಿಜಯ ಸಿಂಗ್ ಘೋಷಣೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಉಮೇದುವಾರಿಕೆ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

ಪಕ್ಷದ ಉನ್ನತ ಹುದ್ದೆಗೆ ಸ್ಪರ್ಧಿಸಿದರೆ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಬೇಕು ಎಂದು ಗೆಹಲೋತ್‌ ಅವರಿಗೆ ಸೂಚಿಸಲಾಗಿತ್ತು. ಅಂದಹಾಗೆ, ಈಗ ‘ಒಬ್ಬರಿಗೆ ಒಂದೇ ಹುದ್ದೆ’ ನಿಯಮ ಖರ್ಗೆ ಅವರಿಗೂ ಅನ್ವಯ ಆಗಲಿದೆ. ಖರ್ಗೆ ಸದ್ಯ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.