ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ (ಮಧ್ಯದಲ್ಲಿ ಇರುವವರು), ಉದಿತ್ ರಾಜ್ (ಎಡದಿಂದ) ಪವರ್ ಖೇರಾ, ದೇವೇಂದ್ರ ಯಾದವ್ ಪಕ್ಷದ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದರು
–ಪಿಟಿಐ ಚಿತ್ರ
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಶಕ್ತಿಯುತ ಜನಲೋಕಪಾಲ ಮಸೂದೆಯನ್ನು ಮಂಡಿಸುವುದಾಗಿ ಘೋಷಿಸಿದೆ. ಜೊತೆಗೆ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಎಸಗಿದ್ದಾರೆ ಎನ್ನಲಾದ ಅಬಕಾರಿ ನೀತಿ ಹಗರಣ ಸಂಬಂಧ ಸಂಪೂರ್ಣ ತನಿಖೆ ನಡೆಸುವುದಾಗಿಯೂ ಕಾಂಗ್ರೆಸ್ ಹೇಳಿದೆ.
ಜತೆಗೆ, ಜಲ ಮಂಡಳಿ ಹಗರಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಹಗರಣಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದಿದೆ. ಈ ಎಲ್ಲ ಭರವಸೆಗಳು ಅರವಿಂದ ಕೇಜ್ರಿವಾಲ್ ಅವರಿಗೆ ಚುನಾವಣೆಯಲ್ಲಿ ಹಿನ್ನೆಡೆ ಉಂಟು ಮಾಡಬಹುದು ಎಂದು ಕಾಂಗ್ರೆಸ್ ಅಂದಾಜಿಸಿದೆ.
ಈಗಾಗಲೇ ಪಕ್ಷವು ತನ್ನ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಅಧಿಕಾರಕ್ಕೇರಿದರೆ ಜಾತಿ ಗಣತಿ ನಡೆಸುವ, ಅತ್ಯಂತ ಹಿಂದುಳಿದ ವರ್ಗಗಳಿರುವ ₹12 ಲಕ್ಷ ಕೆನೆಪದರ ಮಿತಿಯನ್ನು ಏರಿಸುವ, ದೆಹಲಿಗೆ ಹೊಸದೊಂದು ಶಿಕ್ಷಣ ನೀತಿಯನ್ನು ರೂಪಿಸುವ, ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 33ರಷ್ಟು ಮೀಸಲಾತಿ ನೀಡುವ ಮತ್ತು ದಲಿತರಿಗೆ ಸರನಾಥ್, ಮಹು, ಬೋಧಗಯಾಕ್ಕೆ ಉಚಿತ ಯಾತ್ರೆಯ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.
‘ದೆಹಲಿಯಲ್ಲಿ ವಾಸಿಸುತ್ತಿರುವ ಪೂರ್ವಾಂಚಲ ಪ್ರದೇಶದ (ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲವು ಭಾಗಗಳನ್ನು ಸೇರಿಸಿ ಪೂರ್ವಾಂಚಲ ಪ್ರದೇಶ ಎಂದು ಕರೆಯಲಾಗುತ್ತದೆ) ಜನರಿಗಾಗಿಯೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಜಾತಿ ಗಣತಿ, ಇಂದಿರಾ ಕ್ಯಾಂಟೀನ್ ಸ್ಥಾಪನೆಯಂಥ (₹5 ವೆಚ್ಚದಲ್ಲಿ ಈ ಕ್ಯಾಂಟೀನ್ಗಳಲ್ಲಿ ಊಟ ದೊರೆಯಲಿದೆ) ಯೋಜನೆ ಜಾರಿ ಮಾಡುವುದಾಗಿಯೂ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.