ADVERTISEMENT

ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್‍ಗೆ ಭಯ: ಮೋದಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 7:38 IST
Last Updated 1 ಏಪ್ರಿಲ್ 2019, 7:38 IST
   

ವಾರ್ಧಾ: ಮಹಾರಾಷ್ಟ್ರದ ವಾರ್ಧಾ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಎಮಿಸ್ಯಾಟ್ ಉಪಗ್ರಹ ಉಡಾವಣೆ ಮಾಡಿದ ಇಸ್ರೊ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ.

ಕೆಲವು ದಿನಗಳ ಹಿಂದೆ , ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮೋದಿ ಬರೀ ಶೌಚಾಲಯಗಳನ್ನಷ್ಟೇ ಕಾಪಾಡಿದ್ದಾರೆ ಎಂದಿದ್ದರು. ನಾನು ಇದನ್ನು ಹೊಗಳಿಕೆ ಎಂದೇ ಪರಿಗಣಿಸುತ್ತೇನೆ. ಯಾಕೆಂದರೆ ನಾನು ಶೌಚಾಲಯಗಳ ಕಾವಲುಗಾರನಾಗಿದ್ದರಿಂದಲೇ ಈ ದೇಶದಲ್ಲಿರುವ ಮಹಿಳೆಯರ ಕಾವಲುಗಾರನಾಗಲು ಸಾಧ್ಯವಾಗಿದ್ದು ಎಂದು ಮೋದಿ ಹೇಳಿದ್ದಾರೆ.

ಇಂದು ಕಾಂಗ್ರೆಸ್-ಎನ್‍ಸಿಪಿ ರಾತ್ರಿ ನಿದ್ದೆ ಮಾಡಲ್ಲ ಎಂದು ಹೇಳಿದ ಮೋದಿ, ಶರದ್ ಪವಾರ್ ದೇಶದ ಹಿರಿಯ ರಾಜಕಾರಣಿಗಳಲ್ಲೊಬ್ಬರು. ಅವರು ಪ್ರಧಾನಿಯಾಗಲು ಬಯಸುತ್ತಿದ್ದಾರೆ.ಆದರೆ ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ ಯಾಕೆಂದರೆ ಅವರಿಗೆ ಗೊತ್ತಿದೆ ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ ಎಂದು.

ADVERTISEMENT

ಆದಾಗ್ಯೂ, ಎನ್‍ಸಿಪಿ ಕುಟುಂಬದಲ್ಲಿಯೇ ಹಣಾಹಣಿ ನಡೆಯುತ್ತಿದೆ. ಅವರ ಅಳಿಯಂದಿರು ಪಕ್ಷದ ಮೇಲೆ ಅಧಿಪತ್ಯ ಸ್ಥಾಪಿಸಲು ನೋಡುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

* ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಮೈತ್ರಿ ಕುಂಭಕರ್ಣನಂತಿದೆ.ಅದರಲ್ಲಿರುವ ಪ್ರತಿಯೊಬ್ಬರು ಆರು ತಿಂಗಳು ಮಾತ್ರ ಎಚ್ಚರ ಇದ್ದು ಭ್ರಷ್ಟಾಚಾರದಲ್ಲಿ ತೊಡಗಿ ಆನಂತರ ನಿದ್ದೆಗೆ ಜಾರುತ್ತಾರೆ.

* ನಿಮಗೆ ಯಾರು ಬೇಕು? ದೇಶದ ಹೀರೊಗಳು ಬೇಕೋ? ಪಾಕಿಸ್ತಾನದಲ್ಲಿ ಹೀರೊ ಆದವರು ಬೇಕೋ?

* ಹಿಂದೂ ಭಯೋತ್ಪಾದನೆ ಎಂಬುದು ದೇಶಕ್ಕೆ ಮಾಡುವ ಅವಮಾನ, ಭಯೋತ್ಪಾದನೆಯಲ್ಲಿ ಹಿಂದೂಗಳು ತೊಡಗಿರುವ ಯಾವೊಂದು ಘಟನೆಯೂ ಇತಿಹಾಸದಲ್ಲಿಲ್ಲ.

*ಹಿಂದೂ ಭಯೋತ್ಪಾದನೆ ಎಂಬ ಪದ ಬಳಸಿ ಕಾಂಗ್ರೆಸ್ ಅವಮಾನ ಮಾಡಿದೆ.ಇದನ್ನು ದೇಶದ ಜನರು ಕ್ಷಮಿಸುವುದಿಲ್ಲ

*ರಾಹುಲ್ ಗಾಂಧಿ ಕೇರಳದ ವಯನಾಡ್‍ನಿಂದ ಸ್ಪರ್ಧಿಸುತ್ತಿರುವ ವಿಷಯಉಲ್ಲೇಖಿಸಿದ ಪ್ರಧಾನಿ, ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಚುನಾವಣಾ ಕಣಕ್ಕಿಳಿಯಲು ಕಾಂಗ್ರೆಸ್‍ಗೆ ಭಯವಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.