ನವದೆಹಲಿ: ದೇಶದಲ್ಲಿನ ಇಂಧನ ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. 'ಪೆಟ್ರೋಲ್ ಬೆಲೆ ಮೇಲಿನ 'ತೆರಿಗೆ ಡಕಾಯಿತಿ' ಏರಿಕೆಯಾಗುತ್ತಿದೆ ಮತ್ತು ಎಲ್ಲಿಯೋ ಚುನಾವಣೆಗಳು ನಡೆದಾಗ ಮಾತ್ರ ಅದಕ್ಕೆ ಸ್ವಲ್ಪ ವಿರಾಮ ಸಿಗುತ್ತದೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಪೆಟ್ರೋಲ್ ಬೆಲೆಯ ಮೂಲಕ 'ತೆರಿಗೆ ಡಕಾಯಿತಿ' ಹೆಚ್ಚಾಗುತ್ತಿದೆ. ಯಾವುದಾದರೊಂದು ಕಡೆ ಚುನಾವಣೆ ನಡೆದರೆ ಮಾತ್ರ ಬೆಲೆ ಏರಿಕೆಯಿಂದ ಸ್ವಲ್ಪ ಬಿಡುವು ಸಿಗುತ್ತದೆ' ಎಂದು ಹೇಳಿದ್ದಾರೆ. TaxExtortion ಎಂಬ ಹ್ಯಾಷ್ಟ್ಯಾಗ್ ಬಳಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. 'ಜನರಿಗೆ ತೊಂದರೆ ನೀಡುವುದರಲ್ಲಿ ಮೋದಿ ಸರ್ಕಾರ ಹೊಸ ದಾಖಲೆಗಳನ್ನು ಸೃಷ್ಟಿಸಿದೆ' ಎಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ವರ್ಷ ಲೀಟರ್ ಪೆಟ್ರೋಲ್ಗೆ ದಾಖಲೆಯ ₹ 23.53 ಏರಿಕೆಯಾಗಿದೆ ಎಂಬ ಮಾಧ್ಯಮ ವರದಿಯೊಂದನ್ನು ಟ್ಯಾಗ್ ಮಾಡಿದ್ದಾರೆ.
‘ಸಾರ್ವಜನಿಕರಿಗೆ ತೊಂದರೆ ನೀಡುವುದರಲ್ಲಿ ಮೋದಿ ಸರ್ಕಾರ ದೊಡ್ಡ ದಾಖಲೆ ನಿರ್ಮಿಸಿದೆ. ಮೋದಿ ಸರ್ಕಾರದ ಅವಧಿಯಲ್ಲಿ ನಿರುದ್ಯೋಗ ಜಾಸ್ತಿಯಾಗುತ್ತಿದೆ, ಸರ್ಕಾರಿ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಒಂದು ವರ್ಷದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪೆಟ್ರೋಲ್ ದರ ಏರಿಕೆಯಾಗಿದೆ’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದೆಡೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಕೂಡ ಪ್ರಿಯಾಂಕಾ ಗಾಂಧಿ ಅವರು ಹಂಚಿಕೊಂಡಿದ್ದ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಇದೇ 'ಅಚ್ಛೇ ದಿನ್' (ಒಳ್ಳೆಯ ದಿನಗಳು) ಎಂದು ಟ್ವೀಟ್ ಮಾಡಿದ್ದಾರೆ.
ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸತತ ಐದನೇ ದಿನಕ್ಕೆ ಪ್ರತಿ ಲೀಟರಿಗೆ 35 ಪೈಸೆ ಏರಿಕೆ ಮಾಡಲಾಗಿದ್ದು, ದೇಶಾದ್ಯಂತ ಇಂಧನ ದರ ಹೊಸ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ ಅತ್ಯಧಿಕ ₹ 107.59 ಮತ್ತು ಮುಂಬೈನಲ್ಲಿ ಪ್ರತಿ ಲೀಟರ್ಗೆ ₹ 113.46 ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.