ಲಾಥೂರ್ (ಮಹಾರಾಷ್ಟ್ರ):ವಿರೋಧ ಪಕ್ಷ ಕಾಂಗ್ರೆಸ್ ಪಾಕಿಸ್ತಾನ ಮಾತನಾಡುವ ಭಾಷೆಯಲ್ಲಿ ಮಾತನಾಡುತ್ತದೆ. ಜಮ್ಮು ಕಾಶ್ಮೀರದ ವಿಚಾರವಾಗಿ ಕಾಂಗ್ರೆಸ್ ಹೇಗೆ ಮಾತನಾಡುತ್ತದೆಯೋ ಅದೇ ರೀತಿಯಲ್ಲೇ ಕಾಂಗ್ರೆಸ್ ಕೂಡ ಮಾತನಾಡುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೊದಲು ಮಹಾರಾಷ್ಟ್ರದ ಲಾಥೂರ್ಗೆ ಭೇಟಿ ನೀಡಿರುವ ಅವರು, ಅಲ್ಲಿ ಕಾಂಗ್ರೆಸ್ ವಿರುದ್ಧ ಪಾಕಿಸ್ತಾನದ ಅಸ್ತ್ರ ಪ್ರಯೋಗಿಸಿದ್ದಾರೆ. ’ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸುವ ಸಂವಿಧಾನದ ವಿಧಿ 370 ಅನ್ನು ರದ್ದು ಮಾಡುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತದೆ. ಅದರ ಪ್ರಣಾಳಿಕೆ ಪಾಕಿಸ್ತಾನದ ರೀತಿಯಲ್ಲಿದೆ. ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ನವರು ಪ್ರತ್ಯೇಕತಾವಾದಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಪಾಕಿಸ್ತಾನ ಕೂಡ ಅದೇ ಉದ್ದೇಶವನ್ನೇ ಪ್ರತಿಪಾದಿಸುತ್ತಾ ಬಂದಿದೆ,’ ಎಂದು ಅವರು ಟೀಕಿಸಿದರು.
’ದೇಶದ್ರೋಹ ಕಾಯಿದೆ ಬೇಡ ಎಂದು ಕಾಂಗ್ರೆಸ್ ಹೇಳುತ್ತದೆ. ಪಾಕಿಸ್ತಾನವೂ ಹಾಗೆಯೇ ಮಾತನಾಡುತ್ತದೆ. ಇಂಥ ಕಾಂಗ್ರೆಸ್ ಅನ್ನು ನೀವು ನಂಬುತ್ತೀರ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಮತ ಹಾಕುತ್ತಿರುವವರು ದೇಶಕ್ಕಾಗಿಯೇ ಮತ ಹಾಕಿ,’ ಎಂದುಮೋದಿ ಹೇಳಿದರು.
ಇದೇ ವೇಳೆ ಮಹಾರಾಷ್ಟ್ರದ ಶಿವಸೇನದ ನಾಯಕ ಬಾಳಾ ಸಾಹೇಬ್ ಠಾಕ್ರೆಯವರನ್ನು ಮೋದಿ ಬಣ್ಣಿಸಿದರು. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತದೆ. ಆದರೆ, ಬಾಳಾ ಸಾಹೇಬ್ ಠಾಕ್ರೆ ಅವರು ಸಮಾಜಕ್ಕಾಗಿ ದುಡಿದರು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.