ಶಿಲ್ಲಾಂಗ್ : ಈಶಾನ್ಯ ರಾಜ್ಯಗಳಲ್ಲಿ ನಡೆದಿರುವ ಭಾರತ್ ಜೋಡೋ ನ್ಯಾಯಯಾತ್ರೆಯು ಸುದ್ದಿಯ ಕೇಂದ್ರಬಿಂದುವಾಗಿದೆಯೇ ಹೊರತು ಮತಗಳನ್ನು ಸೆಳೆಯಲಾಗದು ಎಂದು ಮೇಘಾಲಯ ಮುಖ್ಯಮಂತ್ರಿ ಕೋನ್ರಡ್ ಸಂಗ್ಮಾ ಟೀಕಿಸಿದ್ದಾರೆ.
ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಯಾತ್ರೆ ನಡೆಸಲು ಕಾಂಗ್ರೆಸ್ ವ್ಯಯಿಸಿದ ಶಕ್ತಿ ಮತ್ತು ಸಂಪನ್ಮೂಲಗಳು ಚುನಾವಣೆಯಲ್ಲಿ ಮತ ಮತ್ತು ಸ್ಥಾನಗಳಾಗಿ ಬದಲಾಗುವುದಿಲ್ಲ. ಅವರಿಗೆ ಸರಿಯಾದ ಪ್ರತಿಫಲ ಸಿಗುವುದಿಲ್ಲ’ ಎಂದರು.
‘ಕಾಂಗ್ರೆಸ್ನಲ್ಲಿ ಹಲವಾರು ಆಂತರಿಕ ಮತ್ತು ಸಂಘಟನಾತ್ಮಕ ಸಮಸ್ಯೆಗಳಿವೆ. ಯಾತ್ರೆ ನಡೆಯುತ್ತಿದ್ದಂತೆ ಹಲವರು ಪಕ್ಷವನ್ನು ತೊರೆಯುತ್ತಿದ್ದಾರೆ. ಅವರು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಬೇಕಿದೆ’ ಎಂದರು.
ಮೇಘಾಲಯದ ಕೆಲ ಪ್ರದೇಶಗಳಿಗೆ ಸಿಎಎಯಿಂದ ವಿನಾಯಿತಿ
ಮೇಘಾಲಯದ ಕೆಲ ಪ್ರದೇಶಗಳಿಗೆ ಪೌರತ್ವ ಕಾಯ್ದೆ(ಸಿಎಎ)ಯಡಿ ವಿನಾಯಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕೋನ್ರಾಡ್ ಸಂಗ್ಮಾ ತಿಳಿಸಿದ್ದಾರೆ.
‘ವಲಸಿಗರನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಗಡಿ ಪರವಣಿಗೆ(ಐಎಲ್ಪಿ)ಯನ್ನು ವಿಸ್ತರಣೆ ಮಾಡುವಂತೆ ಅಥವಾ ಬೇರೆ ನಿಯಮಗಳನ್ನು ಜಾರಿಗೊಳಿಸುವಂತೆ ನಾವು ಕೇಂದ್ರಸರ್ಕಾರಕ್ಕೆ ಮನವಿ ಮಾಡಿದ್ದೇವೆ’ ಎಂದರು.
‘ಸಿಎಎ ಮೊದಲ ಕರಡುಪ್ರತಿಯಲ್ಲಿ ಯಾವುದೇ ರಾಜ್ಯಗಳಿಗೆ ವಿನಾಯಿತಿ ನೀಡಿರಲಿಲ್ಲ. ಬಳಿಕ ನಾವು ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು, ಈ ಹಿನ್ನೆಲೆ ಮೇಘಾಲಯ ಸೇರಿದಂತೆ 6ನೇ ವಿಧಿಯಡಿ ಮತ್ತು ಐಎಲ್ಪಿ ಬರುವ ಪ್ರದೇಶಗಳಿಗೆ ಸಿಎಎಯಿಂದ ವಿನಾಯಿತಿ ನೀಡಲಾಗಿದೆ. 6ನೇ ವಿಧಿಯಡಿ ಬರದ ಪ್ರದೇಶಕ್ಕೂ ವಿನಾಯಿತಿ ನೀಡಬೇಕೆಂಬುವುದು ನಮ್ಮ ಕೋರಿಕೆಯಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.