ಜಮ್ಮು: ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವುದನ್ನು ಕಾಂಗ್ರೆಸ್ನ ಹಿರಿಯ ನಾಯಕ ಕರಣ್ ಸಿಂಗ್ ಬೆಂಬಲಿಸಿದ್ದಾರೆ. ಪವಿತ್ರ ಸ್ಥಳಕ್ಕೆ ಭೇಟಿ ನೀಡುವವರು ಸೂಕ್ತ ವಸ್ತ್ರ ಧರಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ವಸ್ತ್ರಸಂಹಿತೆಯನ್ನು ಈಚೆಗಷ್ಟೇ ಜಾರಿಗೊಳಿಸಿರುವ ಬಾವೆ ವಾಲಿ ಮಾತಾಮಂದಿರ ಆಡಳಿತ ಮಂಡಳಿ, ಶಾರ್ಟ್ಸ್, ಮಿನಿಸ್ಕರ್ಟ್ ಧರಿಸಿ ದೇಗುಲ ಆವರಣ ಪ್ರವೇಶಿಸದಂತೆ ಸೂಚಿಸಿದೆ. ವಿವಿಧೆಡೆಯ ದೇಗುಲಗಳಲ್ಲೂ ಸೂಚನಾ ಫಲಕ ಅಳವಡಿಸಲಾಗಿದೆ.
ಜಮ್ಮು–ಕಾಶ್ಮೀರದಲ್ಲಿನ ಪ್ರಾಚೀನ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ 30ಕ್ಕೂ ಹೆಚ್ಚು ಪ್ರಮುಖ ದೇವಾಲಯಗಳ ಮೇಲ್ವಿಚಾರಣೆ ನಡೆಸುವ ಧರ್ಮಾರ್ಥ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಕರಣ್ ಸಿಂಗ್, ‘ದೇಗುಲಗಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಸ್ವತಃ ಸೂಕ್ತ ಬಟ್ಟೆ ಧರಿಸುವುದನ್ನು ರೂಢಿಸಿಕೊಳ್ಳಬೇಕು. ಅಶ್ಲೀಲವಾಗಿ ಕಾಣಿಸಿಕೊಳ್ಳುವ ಬಟ್ಟೆಗಳನ್ನು ಧರಿಸದೆ, ಗೌರವ ಹೆಚ್ಚಿಸುವ ಉಡುಪು ತೊಡಬೇಕು’ ಎಂದು ಸುದ್ದಿಸಂಸ್ಥೆಗೆ ನೀಡಿದ ವಿಡಿಯೊ ಸಂದರ್ಶನದಲ್ಲಿ ಹೇಳಿದ್ದಾರೆ.
‘ವಸ್ತ್ರಸಂಹಿತೆಯನ್ನು ಟ್ರಸ್ಟ್ ಬಲವಂತವಾಗಿ ಜಾರಿಗೊಳಿಸಲ್ಲ. ಆದರೆ ಪವಿತ್ರ ಸ್ಥಳದಲ್ಲಿ ಯಾತ್ರಿಕರಿಗೆ ಮುಜುಗರವಾಗದಂತೆ ನೋಡಿಕೊಳ್ಳಬೇಕಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.