ನವದೆಹಲಿ: ‘ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ’ ಹಾಗೂ ‘ಸಮಾಜವಾದಿ’ ಪದಗಳನ್ನು ತೆಗೆಯುವ ಅಥವಾ ಮರುಪರಿಶೀಲಿಸುವ ಯಾವುದೇ ಯೋಜನೆ ಇಲ್ಲವೇ ಉದ್ದೇಶ ತಾನು ಹೊಂದಿಲ್ಲ’ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಸಂಸದರೊಬ್ಬರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಕಾನೂನು ಸಚಿವ ಅರ್ಜುನ ರಾಮ್ ಮೇಘವಾಲ್,‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪದಗಳನ್ನು ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ, ಈ ಪದಗಳನ್ನು ಮರುಪರಿಶೀಲನೆ ಮಾಡುವ ಅಥವಾ ಪೀಠಿಕೆಯಿಂದ ತೆಗೆದು ಹಾಕುವ ವಿಚಾರ ಇಲ್ಲ’ ಎಂದು ಹೇಳಿದ್ದಾರೆ.
‘ಈ ಎರಡು ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕುವುದಕ್ಕೆ ಸಂಬಂಧಿಸಿ ಸರ್ಕಾರವು ‘ಔಪಚಾರಿಕ’ವಾಗಿ ಯಾವುದೇ ಕಾನೂನು ಅಥವಾ ಸಾಂವಿಧಾನಿಕ ಪ್ರಕ್ರಿಯೆ ಆರಂಭಿಸಿಲ್ಲ’ ಎಂದೂ ಹೇಳಿದ್ದಾರೆ.
‘ಈ ವಿಚಾರ ಕುರಿತು ಸಾರ್ವಜನಿಕ ವಲಯ ಮತ್ತು ರಾಜಕೀಯ ಪಕ್ಷಗಳ ಮೊಗಸಾಲೆಗಳಲ್ಲಿ ಚರ್ಚೆಗಳು ಅಥವಾ ಸಂವಾದಗಳು ನಡೆದಿರಬಹುದು. ಆದರೆ, ಈ ಪದಗಳನ್ನು ಸಂವಿಧಾನದ ಪೀಠಿಕೆಯಿಂದ ತೆಗೆದು ಹಾಕುವ ಕುರಿತು ಪ್ರಸ್ತುತ ಯಾವುದೇ ಯೋಜನೆ ಅಥವಾ ಉದ್ದೇಶ ಇಲ್ಲ ಎಂಬುದೇ ಸರ್ಕಾರದ ನಿಲುವಾಗಿದೆ’ ಎಂದು ಮೇಘವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.