ADVERTISEMENT

ಸಂವಿಧಾನ ದಿನ ಬಹಿಷ್ಕರಿಸಿದ ಪ್ರತಿಪಕ್ಷಗಳು: ಇದು ಪಕ್ಷದ ಕಾರ್ಯಕ್ರಮವಲ್ಲ ಎಂದ ಮೋದಿ

ಡೆಕ್ಕನ್ ಹೆರಾಲ್ಡ್
Published 26 ನವೆಂಬರ್ 2021, 7:27 IST
Last Updated 26 ನವೆಂಬರ್ 2021, 7:27 IST
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)   

ನವದೆಹಲಿ: ಸಂವಿಧಾನ ದಿನವನ್ನು ಯಾವುದೇ ರಾಜಕೀಯ ಪಕ್ಷ ಆಯೋಜಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಂಸತ್‌ನ ‘ಸೆಂಟ್ರಲ್ ಹಾಲ್’ನಲ್ಲಿ ಆಯೋಜಿಸಲಾಗಿರುವ ಸಂವಿಧಾನ ದಿನ ಕಾರ್ಯಕ್ರಮವನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆರ್‌ಜೆಡಿ, ಶಿವಸೇನಾ ಸೇರಿದಂತೆ 14 ಪಕ್ಷಗಳು ಬಹಿಷ್ಕರಿಸಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಇಂದು ಈ ಸದನ ಮತ್ತು ಸಂವಿಧಾನಕ್ಕೆ ಗೌರವ ಸಲ್ಲಿಸುವ ದಿನ. ಸ್ವಾತಂತ್ರ್ಯ ಹೋರಾಟಗಾರರ ಬಹು ವರ್ಷಗಳ ಶ್ರಮ ಮತ್ತು ತ್ಯಾಗದ ಫಲವಾಗಿದೆ ಸಂವಿಧಾನ. ಇದು ಮಹಾತ್ಮ ಗಾಂಧಿ ಅವರನ್ನು ಸ್ಮರಿಸಬೇಕಾದ ದಿನವೂ ಆಗಿದೆ’ ಎಂದು ಹೇಳಿದರು.

‘ನಮ್ಮ ಸಂವಿಧಾನವು ದೇಶದ ಶತಮಾನಗಳ ಸಂಸ್ಕೃತಿಯನ್ನು ಒಳಗೊಂಡಿದೆ. ಸಂವಿಧಾನಕ್ಕೆ ಧಕ್ಕೆ ತರುವಂಥ ವಿಚಾರಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ. ಇದಕ್ಕಾಗಿಯೇ ನಾವು ಈ ದಿನವನ್ನು ಆಚರಿಸಬೇಕು. ನಮ್ಮ ನಿರ್ಧಾರಗಳು ಸರಿಯಾಗಿ ಇವೆಯೇ ಎಂಬುದನ್ನು ಅರಿಯುವುದಕ್ಕಾಗಿ ನಾವು ಈ ದಿನವನ್ನು ಆಚರಿಸಬೇಕು’ ಎಂದು ಮೋದಿ ಹೇಳಿದರು.

ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನದ ದಿನವನ್ನು ಆಚರಿಸಲು ಸಿದ್ಧರಿಲ್ಲದಿರುವುದು ಕಳವಳಕಾರಿ ಸಂಗತಿ. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮಹತ್ವದ ಭಾಗಗಳು. ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಧಕ್ಕೆ ಬಂದಾಗ ಸಂವಿಧಾನಕ್ಕೂ ಧಕ್ಕೆಯಾಗುತ್ತದೆ ಎಂದೂ ಅವರು ಹೇಳಿದರು.

26/11ರ ಹುತಾತ್ಮರಿಗೆ ಗೌರವ ನಮನ: 26/11ರ ಮುಂಬೈ ದಾಳಿಯ ಹುತಾತ್ಮರಿಗೆ ಮೋದಿ ಗೌರವ ನಮನ ಸಲ್ಲಿಸಿದರು.

ಇದು ನಮ್ಮ ದೇಶಕ್ಕೆ ಶತ್ರುಗಳು ಪ್ರವೇಶಿಸಿ ಭಯೋತ್ಪಾದಕ ಕೃತ್ಯ ಎಸಗಿದ ದಿನ. ಅಂದು ನಮ್ಮ ವೀರ ಯೋಧರು ದೇಶದ ಜನರಿಗಾಗಿ ಪ್ರಾಣತ್ಯಾಗ ಮಾಡಿದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.

ಸ್ವಚ್ಛ ಭಾರತ, ಸ್ವಾವಲಂಬನೆ, ಮಹಿಳೆಯರನ್ನು ಗೌರವಿಸುವುದು ಮತ್ತು ಅವರ ಬೆಳವಣಿಗೆಗೆ ಪ್ರೋತ್ಸಾಹಿಸುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.