ನವದೆಹಲಿ: ಕೊರೊನಾ ವೈರಸ್ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚೀನಾದ ವುಹಾನ್ನಲ್ಲಿ ನೆಲೆಸಿದ್ದ 324 ಭಾರತೀಯರನ್ನು ನವದೆಹಲಿಗೆ ಕರೆತರಲಾಗಿದೆ.
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಏರ್ ಇಂಡಿಯಾ ಪ್ಯಾರಾಮೆಡಿಕಲ್ನ ಐವರು ವೈದ್ಯರು ಸೇರಿದಂತೆ 324 ಭಾರತೀಯರನ್ನು ಒಳಗೊಂಡ ವಿಮಾನ ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಬಂದಿಳಿದಿದೆ.
ಚೀನಾದಿಂದ ಕರೆತಂದಿರುವ ಭಾರತೀಯರನ್ನು ನವದೆಹಲಿ ಮತ್ತು ಮನೇಸರ್ನ ಪ್ರತ್ಯೇಕ ಕೇಂದ್ರಗಳಲ್ಲಿ 14 ದಿನಗಳ ಕಾಲ ಇರಿಸಲಾಗುವುದು. 14 ದಿನಗಳ ನಂತರ ಅವರಲ್ಲಿ ಕೊರೊನಾ ಸೋಂಕಿನ ಯಾವುದೇ ಗುಣ ಲಕ್ಷಣ ಕಂಡುಬರದಿದ್ದಲ್ಲಿ ಮಾತ್ರ ಹೊರಬಿಡಲಾಗುವುದು.
ಚೀನಾಕ್ಕೆ ತೆರಳಿರುವ ಪೈಲಟ್ಗಳು, ಎಂಜಿನಿಯರ್ಗಳು, ಸಹಾಯಕರು, ಏರ್ ಇಂಡಿಯಾ ಸಿಬ್ಬಂದಿ ಮತ್ತು ವೈದ್ಯರು ಭಾರತಕ್ಕೆ ವಾಪಸ್ಸಾದ ನಂತರ ಅವರನ್ನು ಸಹ ಒಂದು ವಾರ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು.
ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ
ಚೀನಾದಲ್ಲಿ 200ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿ, ಸುಮಾರು 17 ರಾಷ್ಟ್ರಗಳಿಗೆ ಹರಡಿರುವ ಕೊರೊನಾ ವೈರಸ್ ಸೋಂಕನ್ನು ‘ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
ಭಾರತಕ್ಕೂ ಕಾಲಿಟ್ಟ ಕೊರೊನಾ
ಅಪಾಯಕಾರಿ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.