ನವದೆಹಲಿ: ಮಾರಣಾಂತಿಕ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವ ಪರಿಣಾಮ ಚೀನಾದ ವುಹಾನ್ ಪ್ರಾಂತ್ಯದಲ್ಲಿ ನೆಲೆಸಿರುವ ಕನಿಷ್ಠ 400 ಭಾರತೀಯರನ್ನು ನವದೆಹಲಿಗೆ ಕರೆತರಲಾಗುವುದು.
ಭಾರತದಿಂದ ವಿಶೇಷ ವಿಮಾನದಲ್ಲಿ ಚೀನಾಕ್ಕೆ ತೆರಳಿರುವ ವೈದ್ಯರು, ಪೈಲೆಟ್ಗಳು, ಎಂಜಿನಿಯರ್ಗಳು ಮತ್ತು ಸಹಾಯಕರ ತಂಡ ಅಲ್ಲಿ ನೆಲೆಸಿರುವ ಭಾರತೀಯ ಮೂಲದ ನಾಗರಿಕರನ್ನು ಕರೆದುಕೊಂಡು ಬರಲಿದೆ.
ಚೀನಾದಿಂದ ಕರೆತರುವ ಜನರನ್ನು ನವದೆಹಲಿ ಮತ್ತು ಮನೇಸರ್ನ ಪ್ರತ್ಯೇಕ ಕೇಂದ್ರಗಳಲ್ಲಿ 14 ದಿನಗಳ ಕಾಲ ಇರಿಸಲಾಗುವುದು. 14 ದಿನಗಳ ನಂತರ ಅವರಲ್ಲಿ ಕೊರೊನಾ ಸೋಂಕಿನ ಯಾವುದೇ ಗುಣ ಲಕ್ಷಣ ಕಂಡುಬರದಿದ್ದಲ್ಲಿ ಮಾತ್ರ ಹೊರಬಿಡಲಾಗುವುದು.
ಚೀನಾಕ್ಕೆ ತೆರಳಿರುವ ಪೈಲಟ್ಗಳು, ಎಂಜಿನಿಯರ್ಗಳು, ಸಹಾಯಕರು, ಏರ್ ಇಂಡಿಯಾ ಸಿಬ್ಬಂದಿ ಮತ್ತು ವೈದ್ಯರು ಭಾರತಕ್ಕೆ ವಾಪಸ್ಸಾದ ನಂತರ ಅವರನ್ನು ಸಹ ಒಂದು ವಾರ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು.
‘ಕನಿಷ್ಠ 400 ಭಾರತೀಯರನ್ನು ಇಂದು ಚೀನಾದ ವುಹಾನ್ನಿಂದ ಏರ್ ಇಂಡಿಯಾ ವಿಮಾನದ ಮೂಲಕ ಸ್ಥಳಾಂತರಿಸಲಾಗುವುದು. ಇಂದು ಮಧ್ಯಾಹ್ನ 12 ಗಂಟೆಗೆ ಹೊರಟು, ನಾಳೆ ಮುಂಜಾನೆ 2ರ ಹೊತ್ತಿಗೆ ವಿಮಾನವು ಹಿಂತಿರುಗಲಿದೆ. ಮುಂದಿನ ವ್ಯವಸ್ಥೆಗಳನ್ನು ವಿದೇಶಾಂಗ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಮಾಡಲಿದೆ’ ಎಂದು ಏರ್ ಇಂಡಿಯಾ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಅಶ್ವೀನಿ ಲೋಹಾನಿ ತಿಳಿಸಿದ್ದಾರೆ.
ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ
ಚೀನಾದಲ್ಲಿ 200ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿ, ಸುಮಾರು 17 ರಾಷ್ಟ್ರಗಳಿಗೆ ಹರಡಿರುವ ಕೊರೊನಾ ವೈರಸ್ ಸೋಂಕನ್ನು ‘ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
ಭಾರತಕ್ಕೂ ಕಾಲಿಟ್ಟ ಕೊರೊನಾ
ಅಪಾಯಕಾರಿ ಕೊರೊನಾ ವೈರಸ್ ಸೋಂಕು ಭಾರತಕ್ಕೂ ಕಾಲಿಟ್ಟಿದೆ. ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.