ಬೆಂಗಳೂರು: ವೈದ್ಯಕೀಯ ಉಪಕರಣ ಮತ್ತು ಸಾಧನಗಳ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿ ಆಗಲೇಬೇಕಾದ ಅನಿವಾರ್ಯತೆ ಇದೆ ಎಂದು ಹಿರಿಯ ವಿಜ್ಞಾನಿ ಕಸ್ತೂರಿ ರಂಗನ್ ಹೇಳಿದ್ದಾರೆ.
ದೇಶದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕು ತಡೆ ಹಾಗೂ ಚಿಕಿತ್ಸೆ ಕಾರ್ಯಕ್ಕೆ ವೈದ್ಯಕೀಯ ಉಪಕರಣ, ಸಾಧನಗಳ ಕೊರತೆಯಾಗಿದೆ.
ಆ ಹಿನ್ನೆಲೆಯಲ್ಲಿ ಶುಕ್ರವಾರ ಮಾತನಾಡಿರುವ ಕಸ್ತೂರಿ ರಂಗನ್, 'ವೈದ್ಯಕೀಯ ಉಪಕರಣ ಮತ್ತು ಸಾಧನಗಳ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಬೇಕಿದೆ. ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯನೀತಿಯನ್ನು ತರುವುದು ಮುಖ್ಯ' ಎಂದು ಪ್ರತಿಪಾದಿಸಿದ್ದಾರೆ.
ಇಂತಹ ಬಿಕ್ಕಟ್ಟಿನಲ್ಲಿ ಅವಶ್ಯಕತೆ ಇರುವ ಸಾಧನಗಳಲ್ಲಿ ಶೇ.10 ಪ್ರಮಾಣದ ಸಾಧನಗಳನ್ನೂ ಸಹ ದೇಶವು ಉತ್ಪಾದಿಸಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
'ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಬೇಕಾದ ತಂತ್ರಜ್ಞಾನ ಅಷ್ಟೇನೂ ಕಷ್ಟದಾಯಕವಲ್ಲ. ಕೊರೊನಾ ಬಿಕ್ಕಟ್ಟು ಉಲ್ಬಣಿಸಿದ ನಂತರ ವೈದ್ಯಕೀಯ ಉಪಕರಣ ಮತ್ತು ಸಾಧನಗಳು ಎಷ್ಟು ಅವಶ್ಯಕ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ದೇಶವು ಸ್ವಾವಲಂಬಿಯಾಗುವಂತಹ ಕಾರ್ಯಸೂಚಿಗಳನ್ನು ಸರ್ಕಾರ ತರಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂಬ ನಂಬಿಕೆ ನನಗಿದೆ' ಎಂದು ಕಸ್ತೂರಿ ರಂಗನ್ ಹೇಳಿದ್ದಾರೆ.
ದೇಶದಾದ್ಯಂತ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 228ಕ್ಕೆ ಏರಿದ್ದು, 6,771 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.