ನವದೆಹಲಿ:ಲಾಕ್ಡೌನ್ ಅವಧಿಯನ್ನು ಮೇ.17ರವರೆಗೆ ವಿಸ್ತರಣೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.ದೇಶವ್ಯಾಪಿ ಲಾಕ್ಡೌನ್ ಮೇ.3ಕ್ಕೆ ಮುಗಿಯಬೇಕಿತ್ತು. ಆದರೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಲಾಕ್ಡೌನ್ ಅವಧಿ ವಿಸ್ತರಿಸಲಾಗಿದೆ.
ಮೇ.3ರ ನಂತರ ಎರಡು ವಾರ ಲಾಕ್ಡೌನ್ ವಿಸ್ತರಿಸಿರುವುದಾಗಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು ಈ ಅವಧಿಯಲ್ಲಿ ಕೆಲವು ಕಾರ್ಯಗಳಿಗೆ ನಿಯಂತ್ರಣ ಹೇರುವ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿದೆ.ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಿದ ಪ್ರದೇಶಗಳಲ್ಲಿ ಈ ರೀತಿ ನಿರ್ಬಂಧಗಳಿರಲಿವೆ.
ಹೊಸ ಮಾರ್ಗ ಸೂಚಿಯ ಪ್ರಕಾರ ಹಸಿರು ಮತ್ತು ಕಿತ್ತಳೆ ವಲಯ ಎಂದು ಗುರುತಿಸಿರುವ ಜಿಲ್ಲೆಗಳಲ್ಲಿ ಕೆಲವೊಂದು ಸಡಿಲಿಕೆಗೆ ಅನುಮತಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದರ ಪ್ರಕಾರ ಕೆಲವೊಂದು ಚಟುವಟಿಕೆಗಳಿಗೆ ಮಾತ್ರ ಲಾಕ್ಡೌನ್ ಸಡಿಲಿಕೆ ನೀಡಲಾಗುವುದು. ಆದರೆ ವಿಮಾನಯಾನ, ರೈಲು, ಮೆಟ್ರೊ, ಅಂತರ ರಾಜ್ಯ ರಸ್ತೆ ಸಾರಿಗೆ, ಶಾಲೆ, ಕಾಲೇಜು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು, ಹೋಟೆಲ್ ಮತ್ತು ರೆಸ್ಟೊರೆಂಟ್ ಸೇರಿದಂತೆ ಆತಿಥ್ಯ ಸೇವೆ, ಸಿನಿಮಾ, ಮಾಲ್, ಜಿಮ್, ಕ್ರೀಡಾಕೂಟ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆ, ಧಾರ್ಮಿಕ ಚಟುವಟಿಕೆ ಮತ್ತು ಆರಾಧನಾಲಯಗಳಿಗೆ ಲಾಕ್ಡೌನ್ ಸಡಿಲಿಕೆ ನೀಡುವುದಿಲ್ಲ.
ಅದೇ ವೇಳೆ ವಿಮಾನಯಾನ, ರೈಲು ಮತ್ತು ರಸ್ತೆ ಸಂಚಾರ ಮಾಡುವುದಾದರೆ ತಕ್ಕ ಕಾರಣವಿರಬೇಕು. ಆ ಕಾರಣಕ್ಕೆ ಗೃಹ ಸಚಿವಾಲಯದ ಅನುಮತಿ ನೀಡಿದರೆ ಮಾತ್ರ ಸಂಚಾರ ಸಾಧ್ಯವಾಗುವುದು.ಅತ್ಯಗತ್ಯವಿಲ್ಲದ ವಸ್ತುಗಳಿಗಾಗಿ ಓಡಾಟ ರಾತ್ರಿ ಸಂಜೆ 7ರಿಂದ ಬೆಳಗ್ಗೆ 7ಗಂಟೆವರೆಗೆ ನಿಷೇಧಿಸಲಾಗಿದೆ.
ಕಿತ್ತಳೆ ವಲಯದಲ್ಲಿ ಕೆಲವೊಂದು ಸಡಿಲಿಕೆ ಇದ್ದು, ಟ್ಯಾಕ್ಸಿ ಮತ್ತು ಕ್ಯಾಬ್ ಸಂಚಾರವಿರಲಿದೆ. ಕ್ಯಾಬ್ನಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕನಿಗೆ ಮಾತ್ರ ಅವಕಾಶ ಇದೆ. ಅನುಮತಿ ಪಡೆದು ಅಂತರ್ ಜಿಲ್ಲಾ ಸಂಚಾರ ನಡೆಸಬಹುದು, ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ, ದ್ವಿಚಕ್ರ ವಾಹನದಲ್ಲಿ ಹಿಂಬದಿ ಪ್ರಯಾಣಿಕರೂ ಹೋಗಬಹುದು.
ಹಸಿರು ವಲಯದಲ್ಲಿ ಹೆಚ್ಚಿನ ನಿರ್ಬಂಧಗಳೇನೂ ಇರುವುದಿಲ್ಲ.ಶೇ. 50 ಜನರನ್ನು ಮಾತ್ರ ಬಸ್ಗಳು ಕರೆದೊಯ್ಯಬಹುದು ಮತ್ತು ಬಸ್ ಡಿಪೊಗಳಲ್ಲಿ ಶೇ.50 ಮಂದಿ ನೌಕರರು ಕೆಲಸ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.