ADVERTISEMENT

ವಿಡಿಯೊ | ‘ಭಾರತವನ್ನು ಬೆಂಬಲಿಸಿದರೆ ಕ್ಷಿಪಣಿ ದಾಳಿ’ ಪಾಕ್ ಸಚಿವನ ಹೇಳಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಅಕ್ಟೋಬರ್ 2019, 3:41 IST
Last Updated 30 ಅಕ್ಟೋಬರ್ 2019, 3:41 IST
ಪಾಕ್ ಸಚಿವ ಅಲಿ ಅಮಿನ್ ಗಂಗಪುರ್
ಪಾಕ್ ಸಚಿವ ಅಲಿ ಅಮಿನ್ ಗಂಗಪುರ್   

‘ಕಾಶ್ಮೀರ ವಿವಾದದಲ್ಲಿ ಪಾಕಿಸ್ತಾನವನ್ನು ಬೆಂಬಲಿಸದ ದೇಶಗಳನ್ನು ಪಾಕ್‌ ತನ್ನ ಶತ್ರುಗಳು ಎಂದು ಪರಿಗಣಿಸುತ್ತದೆ. ಒಂದು ವೇಳೆ ಭಾರತದೊಡನೆ ಯುದ್ಧ ಮಾಡಬೇಕಾಗಿ ಬಂದರೆ ಇಂಥ ದೇಶಗಳಮೇಲೆಯೂ ಪಾಕಿಸ್ತಾನಕ್ಷಿಪಣಿ ದಾಳಿ ನಡೆಸಲಿದೆ’ ಎಂದು ಪಾಕಿಸ್ತಾನದ ಸಚಿವರೊಬ್ಬರು ಹೇಳಿದ್ದಾರೆ.

ಪಾಕ್ ಮೂಲದ ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿರುವಈ ವಿಡಿಯೊ ತುಣುಕು ಇದೀಗ ಹಲವರ ಗಮನ ಸೆಳೆದಿದೆ.

‘ಕಾಶ್ಮೀರ ವಿಚಾರದಲ್ಲಿ ವಿವಾದ ಉಲ್ಬಣಗೊಂಡರೆ ಪಾಕಿಸ್ತಾನಕ್ಕೆ ಯುದ್ಧ ಹೊರತುಪಡಿಸಿ ಬೇರೆ ಆಯ್ಕೆಗಳು ಇರುವುದಿಲ್ಲ. ಆಗ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನವನ್ನು ಕೈಬಿಟ್ಟು, ಭಾರತದ ಜೊತೆ ನಿಲ್ಲುವ ಎಲ್ಲ ದೇಶಗಳನ್ನು ನಾವು ಶತ್ರುಗಳು ಎಂದೇ ಪರಿಗಣಿಸಬೇಕಾಗುತ್ತೆ. ಯುದ್ಧದಲ್ಲಿ ನಾವು ಭಾರತದ ಮೇಲೆ ಹಾರಿಬಿಡುವ ಕ್ಷಿಪಣಿಗಳಲ್ಲಿ ಕೆಲವು ಇಂಥ ದೇಶಗಳನ್ನೂ ತಲುಪುತ್ತವೆ’ ಎಂದು ಪಾಕಿಸ್ತಾನದ ಕಾಶ್ಮೀರ ವ್ಯವಹಾರಗಳ ಸಚಿವ ಅಲಿ ಅಮಿನ್ ಗಂದಪುರ್‌ ಮಂಗಳವಾರ ಕಾರ್ಯಕ್ರಮವೊಂದರ ಭಾಷಣದಲ್ಲಿ ಹೇಳಿದ್ದರು.

ADVERTISEMENT

ಪಾಕ್ ಮೂಲದ ಪತ್ರಕರ್ತೆ ನಾಯಿಲಾ ಇನಾಯತ್‌ ಈ ವಿಡಿಯೊ ತುಣುಕನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಹಲವು ನಾಗರಿಕರು ಸಚಿವರ ಹೇಳಿಕೆ ಖಂಡಿಸಿದ್ದು,‘ಇಂಥ ಕೆಟ್ಟ ಜೋಕ್ ಹೇಳುವ ಬದಲುಶಾಂತಿ ಸ್ಥಾಪನೆಗೆ ಪ್ರಾಮಾಣಿಕಪ್ರಯತ್ನ ಮಾಡಿ’ ಎಂದು ತಿವಿದಿದ್ದಾರೆ.

ಭಾರತ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಪಾಕಿಸ್ತಾನದೊಂದಿಗಿನ ಸಂಬಂಧ ಹಳಸಿತ್ತು. ವಿಶ್ವಸಂಸ್ಥೆಯಲ್ಲಿ ಈ ವಿಚಾರ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನ ಮುಖಭಂಗ ಅನುಭವಿಸಿತ್ತು. ಈಚೆಗೆಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರು ಹೊರರಾಜ್ಯಗಳ ಕೂಲಿಕಾರ್ಮಿಕರನ್ನು ಕೊಲ್ಲುವ ಮೂಲಕ ಭೀತಿ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘನೆ ಪ್ರತಿದಿನದ ವಿದ್ಯಮಾನ ಎಂಬಂತೆ ವರದಿಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪಾಕ್ ಸಚಿವ ಅಲಿ ಅಮಿನ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.