ADVERTISEMENT

ನರೇಂದ್ರ ದಾಭೋಲ್ಕರ್‌ ಹತ್ಯೆ ವಿಚಾರಣೆಯ ಹೈಕೋರ್ಟ್‌ ಮೇಲ್ವಿಚಾರಣೆ ಅಂತ್ಯ

ಪಿಟಿಐ
Published 2 ಆಗಸ್ಟ್ 2023, 10:50 IST
Last Updated 2 ಆಗಸ್ಟ್ 2023, 10:50 IST
ನರೇಂದ್ರ ದಾಭೋಲ್ಕರ್‌
ನರೇಂದ್ರ ದಾಭೋಲ್ಕರ್‌   

ಮುಂಬೈ: ‘ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಅವರ ಹತ್ಯೆ ‍ಪ್ರಕರಣದ ತನಿಖೆಯನ್ನು ಸಿಬಿಐ ಪೂರ್ಣಗೊಳಿಸಿದೆ. ಜೊತೆಗೆ ಪ್ರಕರಣ ಸಂಬಂಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿದ್ದು, ವಿಚಾರಣೆಯು ಆರಂಭಗೊಂಡಿದೆ. ಆದ ಕಾರಣ ಇನ್ನು ಮುಂದೆ ಈ ತನಿಖೆಯ ಮೇಲ್ವಿಚಾರಣೆ ನಡೆಸುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ ಮಂಗಳವಾರ ಹೇಳಿದೆ.

‘ತನಿಖೆ ಮುಕ್ತಾಯಗೊಂಡ ಬಗ್ಗೆ ತನಿಖಾಧಿಕಾರಿಯು ಸಿಬಿಐ ಕೇಂದ್ರ ಕಚೇರಿಗೆ ವರದಿ ನೀಡಿದ್ದಾರೆ. 2023ರ ಮಾರ್ಚ್‌ ವೇಳೆಗೆ 18 ಸಾಕ್ಷಿಗಳ ವಿಚಾರಣೆಯನ್ನೂ ನಡೆಸಲಾಗಿದೆ’ ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ಎಸ್‌. ಗಡ್ಕರಿ ಹಾಗೂ ಪಿ.ಡಿ. ನಾಯ್ಕ್‌ ಅವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಹತ್ಯೆ ಪ್ರಕರಣದ ತನಿಖೆಯನ್ನು 2014ರಲ್ಲಿ ಸಿಬಿಐಗೆ ವಹಿಸಿದಾಗಿನಿಂದಲೂ ತನಿಖೆಯ ಮೇಲ್ವಿಚಾರಣೆಯನ್ನು ಹೈಕೋರ್ಟ್‌ ನಡೆಸುತ್ತಿತ್ತು. ‘ಈ ಪ್ರಕರಣ ಸಂಬಂಧ ಹೈಕೋರ್ಟ್‌ ತನ್ನ ಮೇಲ್ವಿಚಾರಣೆಯನ್ನು ಮುಂದುವರಿಸಬೇಕು’ ಎಂದು ಕೋರಿ ದಾಭೋಲ್ಕರ್‌ ಅವರ ಪುತ್ರಿ ಮುಕ್ತಾ ದಾಭೋಲ್ಕರ್‌ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್‌ ಈ ಆದೇಶ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.